ಗುರುವಿನಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯ ಸ್ತೂತ್ಯಾರ್ಹ : ನಂದಿವೇರಿಶ್ರೀ

Literacy classes for children begin at Mangala Bachpan School

ಮಂಗಲಾ ಬಚಪನ್ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭ

ಗದಗ, 13 : ಭಾರತೀಯ ಪರಂಪರೆಯಲ್ಲಿ ಜ್ಞಾನ, ವಿದ್ಯೆಗೆ ಅತ್ಯಂತ ಮಹತ್ವವಿದೆ. ಗುರುವಿನಿಂದ ಮಕ್ಕಳಿಗೆ ಅಕ್ಷರಭ್ಯಾಸ ಆರಂಭಿಸುವ ಪರಂಪರೆ ಗುರುಕುಲ ಕಾಲದಿಂದಲೂ ಇದ್ದು, ಮಂಗಲಾ ಬಚಪನ್ ಶಾಲೆಯಲ್ಲಿ ಗುರುವಿನಿಂದ ಮಕ್ಕಳಿಗೆ ಅಕ್ಷರ ಕಲಿಕೆ ಆರಂಭಿಸಿದ್ದು ಉತ್ತಮ ಕಾರ್ಯ, ಮಕ್ಕಳ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಗದಗ-ಕಪ್ಪತ್ತಗುಡ್ಡ ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮೀಜಿ ಅವರು ಹೇಳಿದರು.

ಅವರು ನಗರದ ನದೀಶ್ವರ ರಸ್ತೆಯ ಮೊದಲ್ ಕ್ರಾಸ್, ಜಿಲ್ಲಾ ಕ್ರೀಡಾಂಗಣ ಬಳಿ ವಿದ್ಯಾನಗರದಲ್ಲಿನ ಮಂಗಲಾ ಬಚಪನ್ ಪ್ಲೇ ಸ್ಕೂಲ್‌ನಲ್ಲಿ ಶುಕ್ರವಾರ ಶಾಲಾ ಆರಂಭದಲ್ಲಿ ಮಕ್ಕಳಿಗೆ ‘ಅಕ್ಷರ ಅಭ್ಯಾಸ’ ಆರಂಭಿಸುವ ಮೂಲಕ ಆಶೀರ್ವದಿಸಿ ಮಾತನಾಡಿದರು.ವಿದ್ಯೆಗೆ ಮೂಲ ಅಕ್ಷರಾಭ್ಯಾಸ ಆ ಅಕ್ಷರಾಭ್ಯಾಸವನ್ನು ಗುರುವಿನಿಂದ ಮಾಡಿಸುವ ಮೂಲಕ ಮಕ್ಕಳ ಶೈಕ್ಷಣಿಕ ಬದುಕು ಸಾರ್ಥಕಗೊಳ್ಳಲಿ ಎಂಬುದು ಮಂಗಲಾ ಶಿಕ್ಷಣ ಸಂಸ್ಥೆಯ ಉದ್ದೇಶವಾಗಿದೆ. ನಗರದಲ್ಲಿ ಡಾ. ಅಮರೇಶ ನಾಶಿ ಅವರು ಆರಂಭಿಸಿರುವ ಈ ಚಿಕ್ಕ ಮಕ್ಕಳ ಶಾಲೆ ಅತ್ಯಂತ ಆಧುನಿಕತೆಯಿಂದ ಕೂಡಿ, ಆಟದೊಂದಿಗೆ ಪಾಠದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಪಾಲಕರೂ ಕೂಡಾ ತಮ್ಮ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಬಿಡದೇ ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ತಾಯಿಯೇ ಮೊದಲ ಗುರು ಹೀಗಾಗಿ ಪಾಲಕರ ಹೊಣೆ ಶಿಕ್ಷಕರಿಗಿಂತ ದೊಡ್ಡದಿದೆ, ಮಂಗಲಾ ಬಚಪನ್ ಶಾಲೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಉನ್ನತೋನ್ನತ ಹುದ್ದೇಗೇರಲಿ ಎಂದು ಬಯಸುತ್ತೇನೆ ಎಂದು ಹೇಳಿದರು.ಮಂಗಲಾ ಬಚಪನ್ ಶಾಲೆಯ ಕಾರ್ಯದರ್ಶಿಗಳಾದ ಸರ್ವಮಂಗಲಾ ಎ. ನಾಶಿ ಅವರು ಶಾಲೆಯಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಸಂಸ್ಥೆಯ ಅಧ್ಯಕ್ಷರಾದ ಡಾ. ಅಮರೇಶ ಕೆ. ನಾಶಿ ಅವರು, ಚಿಕ್ಕ ಮಕ್ಕಳಿಗೆ ಪಾಲನೆಯೊಂದಿಗೆ ಹೇಗೆ ಶಿಕ್ಷಣ ಮತ್ತು ಶಿಸ್ತು ಕಲಿಸಬೇಕು ಎಂದು ಪಾಲಕರಿಗೆ ಮನವರಿಕೆ ಮಾಡಿಕೊಟ್ಟರು.  

ಸಮಾರಂಭದಲ್ಲಿ ಹಿರಿಯರಾದ ರೇವಣಸಿದ್ದಪ್ಪ ಯಳಮಲಿ, ಪತ್ರಕರ್ತ ಹಾಗೂ ಹವ್ಯಾಸಿ ರಂಗಕರ್ಮಿ ಮೌನೇಶ ಚಿ. ಬಡಿಗೇರ(ನರೇಗಲ್ಲ), ಹಿರಿಯರಾದ ವಸಂತ ಸೂಗೂರ, ಸುನೀಲ ದಿವಾಕರ, ಶಾಲಾ ಕೋಆರ್ಡಿನೇಟರ್ ನೇತ್ರಾವತಿ ವಿಣೇಕರ್, ಬೆಲ್ಲದ, ಪಾಲಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 

ಆರಂಭದಲ್ಲಿ ಮುಕ್ತಾ ಸೂಗೂರ ಪ್ರಾರ್ಥಿಸಿದರು. ಕುಮಾರಿ ಅಚ್ಚುತಾ ಮುಂಡರಗಿ ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.