ಮುಂಡರಗಿ 28 : ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರೈತರಿಗೆ ಅವಶ್ಯವಿರುವ ಮೆಕ್ಕೆಜೋಳ, ಹೆಸರು, ಸಜ್ಜೆ ಮೊದಲಾದ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಲಾಗಿರುತ್ತದೆ. ಅಗತ್ಯಕ್ಕೆ ತಕ್ಕಂತೆ ಬೀಜವನ್ನು ವಿತರಣೆ ಮಾಡಲಾಗುತ್ತದೆ. ರೈತರು ಈ ಸೌಲಭ್ಯ ಪಡೆದು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸಬೇಕು ಎಂದು ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರ ಆಯೋಜಿಸಿದ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷದಲ್ಲಿ ಉತ್ತಮ ಮಳೆಯ ಆಗಮನದಿಂದ ರೈತರು ಹಸನ್ಮುಖಿಯಾಗಿದ್ದಾರೆ. ಈ ಭಾರಿ ವಾಡಿಕೆ 95ಎಂ.ಎಂ ಮಳೆಗಿಂತ 102ಎಂ.ಎಂ ಮಳೆಯಾಗಿದೆ. ಆದ್ದರಿಂದ ಉತ್ತಮ ಫಸಲು ಬರುವ ನೀರೀಕ್ಷೆಯೂ ಇದೆ. ರೈತ ಸಂಪರ್ಕ ಕೇಂದ್ರದಲ್ಲಿ ತಮಗೆ ಬೇಕಾದ ಬಿತ್ತನೆ ಬೀಜವನ್ನು ಪಡೆದುಕೊಳ್ಳಿ. ಹಾಗೂ ರೈತರು ಮಿಶ್ರಣವಾದ ಗೊಬ್ಬರವನ್ನು ಬಳಸಲು ರೈತರು ಆಸಕ್ತಿ ಹೊಂದಿದ್ದಾರೆ. ಹೀಗಾಗಿ ರೈತರಿಂದ ಡಿಎಪಿ ಗೊಬ್ಬರದ ಬಗ್ಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ.ಆದರೆ ಅದರ ಉತ್ಪಾದನೆಯಲ್ಲಿ ಕೊರತೆ ಇರುವ ಕಾರಣ ಅದು ಲಭ್ಯವಾಗುತ್ತಿಲ್ಲಸ. ಪ್ರಸ್ತುತ ಎಂಟು ಸಹಕಾರಿ ಕೇಂದ್ರದಲ್ಲಿ ಸಂಯುಕ್ತ ಗೊಬ್ಬರ ಸಿಗುತ್ತದೆ. ರೈತರ ಬೇಡಿಕೆಯಂತೆ ಎಲ್ಲರಿಗೂಗೊಬ್ಬರವನ್ನು ನೀಡಬೇಕು. ಹಾಗೂ ಯಾವುದೇ ರೈತರಿಗೆ ಗೊಬ್ಬರವನ್ನು ನೀಡದಿದ್ದರೆ ಅಂತಹ ಸಹಕಾರಿ ಅಂಗಡಿಗಳ ಲೈಸನ್ಸ್ನ್ನು ರದ್ದುಗೊಳಿಸಲಾಗುವುದು. ಇದಕ್ಕೆ ಕೃಷಿ ಅಧಿಕಾರಿಗಳು ಹೊಣೆಯಾಗುತ್ತಾರೆ. ಖಾಸಗಿ ಗೊಬ್ಬರ ಅಂಗಡಿಯವರು ರೈತರಿಗೆ ಗೊಬ್ಬರವನ್ನು ಕೊಡದೇ ಸಂಗ್ರಹಿಸಿಕೊಂಡು, ಕೊನೆ ಹಂತದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ಆರೋಪ ಅಧಿಕವಾಗಿದೆ. ಅಂತಹ ಅಂಗಡಿಯನ್ನು ಕೃಷಿ ಅಧಿಕಾರಿ ಗಮನಿಸಬೇಕು ಎಂದು ಎಚ್ಚರಿಸಿದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಾಣೇಶ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ, 2025-26ನೇ ಸಾಲಿನಲ್ಲಿ ಮುಖ್ಯವಾಗಿ ಮೆಕ್ಕೆಜೋಳ ಬೆಳೆಗೆ ಹೆಚ್ಚು ಬೇಡಿಕೆ ಇದೆ. ಯಾವುದೇ ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಲಭ್ಯವಿರುತ್ತದೆ. ರೈತರು ಸಹಕರಿಸಬೇಕು. ಹಾಗೂ ರಸಗೊಬ್ಬರದ ದಾಸ್ತಾನು ಮಾಡುತ್ತಿದ್ದೇವೆ. ಅದರಲ್ಲಿ ರೈತರು ಡಿಎಪಿ ಗೊಬ್ಬರಕ್ಕೆ ಮಾತ್ರ ಬೆನ್ನು ಹತ್ತದೇ ಸಂಯುಕ್ತ ಗೊಬ್ಬರವನ್ನು ಬಳಸಿಕೊಳ್ಳಬೇಕು. ಹಾಗೂ ರೈತರು ಕೃಷಿ ಇಲಾಖೆಯಿಂದ ಬರುವಂತ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.
ಕೃಷಿ ಪಂಡಿತ ಹೇಮಗೀರೀಶ ಹಾವಿನಾಳ ಮಾತನಾಡಿ, ಪ್ರಸ್ತುತ ಭೂಮಿಯ ಫಲವತ್ತತೆ ತುಂಬಾ ಹಾಳಾಗಿದೆ. ಈ ಬಗ್ಗೆ ಅರಿತು ಭೂಮಿಗೆ ತಕ್ಕಂತೆ ಬೀಜವನ್ನು ಬಿತ್ತನೆ ಮಾಡಬೇಕು. ಕೃಷಿ ತಜ್ಞರು ಹೆಚ್ಚು ಗ್ರಾಮೀಣ ಪ್ರದೇಶದ ರೈತರಿಗೆ ಜಾಗೃತಿ ಮೂಡಿಸಬೇಕು. ಹಾಗೂ ಶಾಸಕರು ಮುಂಡರಗಿ ಭಾಗದ ರೈತರಿಗೆ ಇನ್ನೂ ಹೆಚ್ಚಿನ ನೀರಾವರಿಯಾಗುವಂತೆ ಕಾಳಜಿವಹಿಸಬೇಕು. ನೈಜವಾದ ಬೆಳೆ ಹಾನಿಗೊಳಗಾದ ರೈತರಿಗೆ ಬೆಳೆ ವಿಮೆಸೌಲಭ್ಯ ಒದಗಿಸಬೇಕು ಎಂದರು.ಈ ವೇಳೆ ಕೃಷಿ ಅಧಿಕಾರಿ ವೀರೇಶ, ಜ್ಯೋತಿ ಹಾನಗಲ್ಲ, ಮೈಲಾರ್ಪ ಕಲಕೇರಿ, ಅರುಣಾ ಪಾಟೀಲ್, ಶಿವು ನವಲಗುಂದ, ಹನಮರಡ್ಡಿ ಮಾದನೂರ, ಈಶ್ವರ್ಪ ಮಲ್ಲಶೇಟ್ಟರ್, ಬಸವರಾಜ ಚಿಗಣ್ಣವರ, ಶಿವನಗೌಡ ಗೌಡ್ರ, ಅಂಬವ್ವ ಕಟ್ಟಿಮನಿ ಹಾಗೂ ಇಲಾಖೆ ಸಿಬ್ಬಂದಿ, ರೈತರು ಇದ್ದರು.