ಮಾನವನ ಆರೋಗ್ಯಕರ ಜೀವನದಲ್ಲಿ ಹಾಲು ಬಹುಮುಖ್ಯ: ಟಿ.ಮಲ್ಲಿಕಾರ್ಜುನ

Milk is very important for a healthy human life: T. Mallikarjuna

ಬಳ್ಳಾರಿಯಲ್ಲಿ ವಿಶ್ವ ಹಾಲು ದಿನಾಚರಣೆ 

ಬಳ್ಳಾರಿ 03: ಆರೋಗ್ಯಕರ ಜೀವನ, ಆಹಾರ ಪದ್ಧತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹಾಲಿನ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂ.01 ರಂದು ವಿಶ್ವ ಹಾಲು ದಿನ ಆಚರಣೆ ಮಾಡಲಾಗುತ್ತದೆ ಎಂದು ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ ಅವರು ಹೇಳಿದರು. 

ನಗರದ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಮಾನವನ ಜೀವನದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಅಗತ್ಯವಾಗಿದೆ. ಹಾಲಿನಲ್ಲಿ ಕ್ಯಾಲಿಯಂ, ಪ್ರೋಟಿನ್, ವಿಟಮಿನ್‌-ಬಿ2 ಮುಂತಾದ ಪೋಷಕಾಂಶಗಳು ಅಡಗಿವೆ ಎಂದು ತಿಳಿಸಿದರು. 

ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ, ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ತಿಳಿಸುವುದು ವಿಶ್ವ ಹಾಲು ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು. 

ರಾಬಕೋವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಮಾರುಕಟ್ಟೆ ವ್ಯವಸ್ಥಾಪಕ ಮೋಹನ್ ಎಲ್‌.ಶಿಂಧೆ ಅವರು ಮಾತನಾಡಿ, ವಿಶ್ವ ಹಾಲು ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 1ನೇ ತಾರೀಖಿನಂದು ಆಚರಿಸಲು 2001 ರಲ್ಲಿ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು(ಎಫ್‌.ಎ.ಓ.) ಪ್ರಾರಂಭಿಸಿತು. ಡೇರಿ ಉದ್ಯಮಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಬೆಂಬಲ ಒದಗಿಸಲು ಈ ದಿನದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು. 

ಇದೇ ವೇಳೆ ಕರ್ನಾಟಕ ಹಾಲು ಮಹಾಮಂಡಳಿಯಿಂದ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಬೇಕರಿ ಉತ್ಪನ್ನಗಳಾದ ನಂದಿನಿ ಮಫಿನ್ಸ್‌, ಸ್ಲೈಸ್ ಕೇಕ್ಸ್‌ ಮತ್ತು ಬಾರ್ ಕೇಕ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಕೆ.ವಿಶ್ವನಾಥ, ಶುಶ್ರೂಷಕ ಅಧೀಕ್ಷಕರಾದ ವಿಮಲಾಕ್ಷಿ, ಸಹಾಯಕ ಆಡಳಿತ ಅಧಿಕಾರಿ ರಜಿಯಾ ಬೇಗಂ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ  ವ್ಯವಸ್ಥಾಪಕ(ಡೇರಿ) ಸಿದ್ದರಾಮಪ್ಪ ಶಿವರಾಯ ಕಣ್ಣೂರ, ಮಾರುಕಟ್ಟೆ  ವ್ಯವಸ್ಥಾಪಕ ಮೋಹನ್ ಎಲ್‌.ಶಿಂಧೆ, ಸಹಾಯಕ ವ್ಯವಸ್ಥಾಪಕ ಎರಿ​‍್ರಸ್ವಾಮಿ ರೆಡ್ಡಿ, ಉಪ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ, ಪ್ರಭಾರ ಉಪ ವ್ಯವಸ್ಥಾಪಕ ರಂಗಸ್ವಾಮಿ, ಮಾರುಕಟ್ಟೆ ಸೂಪರ್‌ವೈಸರ್ ಲೋಹಿತ್ ಕುಮಾರ್, ಮಾರುಕಟ್ಟೆ ಸಹಾಯಕ  ನೂರ್ ಮಹಮ್ಮದ್, ಸಿ.ಎನ್‌.ಮಂಜುನಾಥ, ಬಾಬು.ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 

ಬಳಿಕ ಕಾರ್ಯಕ್ರಮದಲ್ಲಿ ನಂದಿನಿ ಗುಡ್ ಲೈಫ್ ಪೆಟ್ ಬಾಟಲ್ ಗಳನ್ನು ವಿತರಿಸಲಾಯಿತು.