ಪ್ರಸಂಗ-ಅವಕಾಶಗಳು ಮೇಧಾವಿ ಶಕ್ತಿ ಹೆಚ್ಚಿಸುತ್ತವೆ: ಸಹಜಾನಂದಶ್ರೀ

Opportunities and circumstances increase intellectual power: Sahajanandashree

ಲೋಕದರ್ಶನ ವರದಿ 

ಪ್ರಸಂಗ-ಅವಕಾಶಗಳು ಮೇಧಾವಿ ಶಕ್ತಿ ಹೆಚ್ಚಿಸುತ್ತವೆ: ಸಹಜಾನಂದಶ್ರೀ  

ಮಹಾಲಿಂಗಪುರ 22: ಪ್ರಸಂಗಗಳು ಮತ್ತು ಅವಕಾಶಗಳು ಮನುಷ್ಯನ ಮೇಧಾವಿ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಸಿದ್ದಾರೂಢ ಆಶ್ರಮದ ಸಹಜಾನಂದ ಶ್ರೀಗಳು ಹೇಳಿದರು. 

ಭಾನುವಾರ ಸ್ಥಳೀಯ ಸಿದ್ಧಾರೂಢ ಆಶ್ರಮದ ಸಾಂಸ್ಕೃತಿಕ ಭವನದಲ್ಲಿ ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯ 2003-04 ನೇ ಸಾಲಿನ ಏಳನೇ ತರಗತಿ ಹಳೆಯ ವಿದ್ಯಾರ್ಥಿಗಳಿಂದ ನಡೆದ ಗುರುವಂದನ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು. ಮನುಷ್ಯನಿಗೆ ಅವಕಾಶಗಳು ದೊರೆತಾಗ ಸಕಾರಾತ್ಮಕ ಚಿಂತನ, ಮಂಥನಗಳೊಂದಿಗೆ, ಅವುಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ, ಆತ ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾನೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹೊಂದಬೇಕು ಎಂದು ಹಳೆ ವಿಧ್ಯಾರ್ಥಿಗಳಿಗೆ ತಿಳಿ ಹೇಳಿದರು. ದಶಕಗಳ ಹಿಂದೆ ಕಲಿತ ಶಾಲೆಯ ಋಣ ಮರೆಯದ ತಮಗೆ ಶಾಲೆ ಕೃತಜ್ಞತೆ ತಿಳಿಸುತ್ತದೆ ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಕಲಿತ ಶಾಲೆ, ತಂದೆ, ತಾಯಿ, ಜ್ಞಾನ ಮತ್ತು ಸ್ನೇಹ ಕೊಟ್ಟವರನ್ನು ಎಂದೂ ಮರೆಯಬಾರದು.ಅವರ ಋಣ ತೀರಿಸಲು ನಮ್ಮಿಂದ ಸಾಧ್ಯವಿಲ್ಲ.ಈಗ ತಾವು ಮಾಡಿರುವ ಕಾರ್ಯಕ್ರಮದಿಂದ ಋಣ ತೀರಿಸದೇ ಹೋದರೂ ಉಪಕಾರ ಸ್ಮರಣೆ ಮಾಡಿದಂತೆ, ತಾವು ಓಲ್ಡ್‌ ಅಲ್ಲ ಗೋಲ್ಡ್‌ ಎಂದರು. 

ಅಧ್ಯಕ್ಷತೆ ವಹಿಸಿ ಶೇಖರ ಅಂಗಡಿ ಮಾತನಾಡಿ, ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನು ನಡೆಸುವುದು ಬಹಳ ದುಸ್ತರವಾಗಿದೆ. ಇಂತಹದರಲ್ಲಿ ಶಿಕ್ಷಕ, ಶಿಕ್ಷಕಿಯರು ಕಡಿಮೆ ವೇತನದಲ್ಲಿ ನಮ್ಮ ಶಾಲೆಗೆ ಸೇವೆ ನೀಡಿ ಬಡ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ ಅವರಿಗೆ ನಾನು ಚಿರಋಣಿ ಎಂದರು. ಎರಡು ದಶಕಗಳ ಹಿಂದೆ ತಾವು ಕಲಿತ ಶಾಲೆಯನ್ನು ಮರೆಯದೆ ಗುರುವಂದನೆ ಕಾರ್ಯಕ್ರಮ ಮಾಡುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಿರಿ ತಮಗೆಲ್ಲರಿಗೂ ಧನ್ಯವಾದಗಳು ಎಂದರು. 

ಶಾಲೆಯ ಕಾರ್ಯದರ್ಶಿ ಶ್ರೀಶೈಲಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿ, ಅಂದು ಶಾಲಾ ಮಂಡಳಿ ಹುಟ್ಟು ಹಾಕಿದ ಶೈಕ್ಷಣಿಕ ಕಾರ್ಯ ಇಂದು ತಾವು ಅದ್ಧೂರಿ ಕಾರ್ಯಕ್ರಮ ಕೈಗೊಂಡು ನಮ್ಮನ್ನೆಲ್ಲ ನೆನಪಿಸಿಕ್ಕೊಳ್ಳುವ ಮೂಲಕ ನೀಡುತ್ತಿರುವ ಗೌರವ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದರು. 

ಶಾಲೆಯ ಹಳೆ ಶಿಕ್ಷಕಿಯರಾದ ಸುಜಾತಾ ಹೊಸಕೇರಿ, ರಾಜೇಶ್ವರಿ ಕುಳ್ಳೋಳ್ಳಿ, ಬಿಂದುಮನಿ ಶರ್ಮಾ, ಜಯಶ್ರೀ ಬಬಲಾದಿ, ಜ್ಯೋತಿ ಕುರಿ ಅವರು ಎರಡು ದಶಕಗಳ ಹಿಂದಿನ ವಿಧ್ಯಾರ್ಥಿಗಳ ಜೊತೆಯ ಆಟ, ಪಾಟ ಮತ್ತು ಒಡನಾಟ ಕುರಿತು ಮಾತನಾಡಿದರು.  

ದೀಪಾ ಬಾಡನವರ, ಚೇತನ ಕುಂದರಗಿ, ರಾಜು ದಢೂತಿ ಹಳೆಯ ನೆನಪುಗಳ ಬುತ್ತಿ ಬಿಚ್ಚಿದರು. ಉಳಿದ ಹಲವರು ಹಾಡು, ನೃತ್ಯ ಮಾಡಿ ರಂಜನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಗೀತಾ ಪಾಟೀಲ್ ಮತ್ತು ಶಿಕ್ಷಕಿಯರಾದ ಸುವರ್ಣ ಕುಳ್ಳೋಳ್ಳಿ, ಶಿವಾನಂದ ಬಿಜ್ಜರಗಿ, ಅಶ್ವಿನಿ ಚಿಚಖಂಡಿ ಸ್ವಾಗತಿಸಿ, ಉಮಾ ಗುದಗಿ ಮತ್ತು ತೌಫಿಕ್ ಮಾಲಾಪೂರ ನಿರೂಪಿಸಿ, ವಂದಿಸಿದರು.