ಬಹುತ್ವವನ್ನು ಗೌರವಿಸಬೇಕು : ಡಾ. ರಹಮತ್ ತರೀಕೆರೆ

Pluralism should be respected: Dr. Rahmat Tarikere

ಹಂಪಿ 06: ಭಾರತವು ಬಹುತ್ವಗಳ ರಾಷ್ಟ್ರ, ಬಹುತ್ವವನ್ನು ಗೌರವಿಸಿದರೆ ಭಾರತ ಬದುಕುತ್ತದೆ ಇಲ್ಲವಾದರೆ ನೆಮ್ಮದಿ ಇಲ್ಲವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ರಹಮತ್ ತರೀಕೆರೆ ಅವರು ಅಭಿಪ್ರಾಯಪಟ್ಟರು. 

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ 5ನೇ ಮಾರ್ಚ್‌ 2025ರಂದು ಹಾಲುಮತ ಅಧ್ಯಯನ ಪೀಠ ವತಿಯಿಂದ ಹಮ್ಮಿಕೊಂಡಿದ್ದ ಹಾಲುಮತ ಸಾಹಿತ್ಯ ಸಂಸ್ಕೃತಿ ಅಧ್ಯಯನ ಕಮ್ಮಟವನ್ನು ಉದ್ಘಾಟಿಸಿ, ಮಾತನಾಡುತ್ತಾ, ಮತ ಎಂದರೆ ಲೋಕ ದೃಷ್ಟಿ ತತ್ವಶಾಸ್ತ್ರ ಎಂದು ಅರ್ಥವಾಗುತ್ತದೆ, ಕರ್ನಾಟಕದ ಎಷ್ಟೋ ಸಮುದಾಯಗಳಿಗೆ ಅವುಗಳನ್ನು ಅರಿವ ಕೆಲಸ ಇನ್ನೂ ಆಗಿಲ್ಲ ಪ್ರತಿಯೊಂದು ಜಾತಿಯ ಒಳಗೆ ಮತ್ತೊಂದು ಪಂಗಡ ಇದೆ. ಸಮೃದ್ಧಿಯನ್ನು ಉತ್ತೇಜಿಸುವುದು ಹಾಲುಮತ, ಪಶುಗಾಯಿ ಪಂಥಗಳ ಮೇಲೆ ಅಧ್ಯಯನಗಳು ನಡೆಯಬೇಕು ಎಂದರು. ಇನ್ನೂ ಪಶುಪಾಲನೆ ಮಾಡುವವರು ಶ್ರೇಷ್ಠ ಎಂದರೆ, ಹಂದಿ, ಕುದುರೆ, ಕತ್ತೆ ಇವುಗಳನ್ನು ಸಾಕುವವರನ್ನು ಏಕೆ ಇದರಿಂದ ಹೊರಗಡೆ ಇಟ್ಟಿದ್ದೀವಿ ಒಮ್ಮೆ ಆಲೋಚನೆ ಮಾಡಬೇಕು ಎಂದು ನುಡಿದರು. 

ಪ್ರಮುಖವಾಗಿ ಸಮುದಾಯಗಳ ಅಧ್ಯಯನ ವರ್ತಮಾನಗಳಿಂದ ಕೂಡಿರಬೇಕು. ಪ್ರಾದೇಶಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾಗಿದೆ. ಬಹುಮುಖ್ಯವಾಗಿ ದಲಿತ ಎಂಬ ಪದ ರಾಜಕೀಯ, ಸಾಮಾಜಿಕವಾಗಿ ಬಳಕೆಯಲ್ಲಿರುವುದರಿಂದ ಪರಿಚಿತವಾಗಿದ್ದು, ಭಾರತದಲ್ಲಿ ಪದರ ರೂಪದಲ್ಲಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ದ್ವೇಷವನ್ನು ಕಾಣಬಹುದು. ಅದರಲ್ಲೂ ಮುಸ್ಲಿಮರಲ್ಲಿಯೂ ಕೂಡ ಅಸ್ಪೃಶ್ಯತೆವಿದ್ದು, ಇದು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಇಂತಹ ಸಮುದಾಯಗಳ ಮೂಲ ನೆಲೆಯಲ್ಲಿ ಹರಿಯಬೇಕಾದರೆ ಏಕರೂಪಿ ಪರಿಭಾಷೆಯನ್ನು ತೆಜಿಸಬೇಕು, ಹಾಗೆಯೇ ಜಾತಿ ಸಮೂಹದ ಕಲ್ಪನೆಯಿಂದ ಹೊರಬಂದು ಸಂಶೋಧನೆ ನಡೆಯಬೇಕೆಂದು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ, ಹಾಲುಮತ ಸಂಸ್ಕೃತಿ ಎನ್ನುವುದು ಬಹಳ ವಿಶಾಲವಾದ ಅರ್ಥದಲ್ಲಿ ಬಳಕೆಯಲ್ಲಿರುವ ಸಂಸ್ಕೃತಿ. ಅನೇಕ ಆಚರಣೆಗಳು ಈ ಸಂಸ್ಕೃತಿಯಲ್ಲಿ ಒಳಗಾಗಿವೆ. ಇಂದು ಅನೇಕ ಕಾರಣಗಳಿಗಾಗಿ ಅನಾದಿ ಕಾಲದಲ್ಲಿ ಇದ್ದಂತಹ ಆಚರಣೆ ಮತ್ತು ಸಂಪ್ರದಾಯಗಳು ಅನ್ಯಸಂಸ್ಕೃತಿಗೆ ಪ್ರಭಾವಕ್ಕೆ ಒಳಗಾಗಿವೆ. ಇನ್ನು ಕೆಲವೇ ದಿನಗಳಲ್ಲಿ ಮೂಲ ಆಚರಣೆಗಳ ಲಕ್ಷಣಗಳು ಮರೆಯಾಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಇಂತಹ ಅಧ್ಯಯನ ಕಮ್ಮಟಗಳ ಮೂಲಕ ಅಂತಹ ಅಳಿವಿನ ಅಂಚಿನಲ್ಲಿರುವ ಸಂಸ್ಕೃತಿಯನ್ನು ರಕ್ಷಿಸಬೇಕು ಎಂದು ತಿಳಿಸಿದರು. 

ಹಾಲುಮತ ಅಧ್ಯಯನ ಪೀಠದ ಸಂಚಾಲಕರಾದ ಡಾ. ಎಫ್‌.ಟಿ. ಹಳ್ಳಿಕೇರಿ ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.