ತಮಿಳುನಾಡಿನ ಹಿರಿಯ ನಟ ಕಮಲ್ ಹಾಸನ್ ಅವರ ಬೇಜವಾಬ್ದಾರಿ ವರ್ತನೆ ಖಂಡಿಸಿ ಪ್ರತಿಭಟನೆ

Protests in Tamil Nadu condemning the irresponsible behavior of veteran actor Kamal Haasan

ಬೆಂಗಳೂರು 09: ಹಿರಿಯ ನಟ ಕಮಲ್ ಹಾಸನ್ ಅವರು, ಸಭೆಯೊಂದರಲ್ಲಿ ತಮಿಳು ಮತ್ತು ಕನ್ನಡ ಭಾಷೆಯ ಕುರಿತು ಸಾಂದರ್ಭಿಕವಾಗಿ ಮಾತನಾಡುತ್ತಾ, ತಮಿಳು ಕನ್ನಡ ಭಾಷೆಯ ಉಗಮಕ್ಕೆ ಕಾರಣವಾಗಿದ್ದು, ತಾಯಿ ಮಗುವಿನ ಸಂಬಂಧ ಎಂದು ಹೇಳಿ, ವಿವಾದ ಸೃಷ್ಟಿಸಿದರು. ಇವರ ಹೇಳಿಕೆ ಕುರಿತಂತೆ ನಾಡಿನಾದ್ಯಂತ ಪ್ರತಿಭಟನೆ, ಖಂಡನೆಗಳು ನಡೆಯುತ್ತಲೇ ಇವೆ. ಕರ್ನಾಟಕ ಉಚ್ಚನ್ಯಾಯಾಲಯವೂ ಖಾರವಾಗಿ ಪ್ರಶ್ನಿಸಿ, ಕನ್ನಡಿಗರ ಕ್ಷಮೆ ಕೇಳಲು ಸೂಚಿಸಿದಾಗಲೂ ಬೇಜವಾಬ್ದಾರಿತನದಿಂದ ನಡೆದುಕೊಳ್ಳುತ್ತಿರುವುದು ಈ ವ್ಯಕ್ತಿಯ ಘನತೆಗೆ ತಕ್ಕುದಲ್ಲ. 

ಒಬ್ಬ ಭಾಷಾ ಸಂಶೋಧಕ ಅಥವಾ ಭಾಷಾ ಇತಿಹಾಸಕಾರ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಇವ್ಯಾವುದರ ಗಂಧ ಗಾಳಿಯೂ ಇಲ್ಲದ ಕಮಲ ಹಾಸನ್ ಮಾತಾಡಿದ್ದು ಸರಿ ಅಲ್ಲ. ಭಾಷೆ ಮತ್ತು ಗಡಿ ವಿಚಾರದಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದನ್ನು ಯಾರೂ ಮಾಡಬಾರದು. ತಮಿಳು ಮತ್ತು ಕನ್ನಡ ಭಾಷಾ ವಿದ್ವಾಂಸರು ಈಗಾಗಲೇ ದ್ರಾವಿಡ ಭಾಷೆಗಳ ಬಗ್ಗೆ ದಾಖಲೆ ಸಹಿತ ನೀಡಿಯಾಗಿದೆ. ದ್ರಾವಿಡ ಭಾಷೆಗಳು ಸಮಾನಾಂತರವಾಗಿ ಬೆಳೆದು ಬಂದಿದ್ದು, ಭಾಷಾ ತಜ್ಞರ ಅಭಿಪ್ರಾಯದಲ್ಲಿ ಯಾವುದೇ ಭಾಷೆ ಇನ್ನೊಂದು ಭಾಷೆಗೆ ಜನ್ಮ ಕೊಡದು. ಕನ್ನಡ ಭಾಷೆಯ ಇತಿಹಾಸ ಕ್ರಿಸ್ತ ಪೂರ್ವ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ.  

ಹೀಗಿದ್ದಾಗ ಕಮಲ್ ಹಾಸನ್ ಅವರು ತಮ್ಮ ಮಾತಿಗೆ ಕ್ಷಮೆ ಕೇಳಿ ಆದ ಪ್ರಮಾದವನ್ನು ಸರಿಪಡಿಸುವುದನ್ನು ಬಿಟ್ಟು ಮೊಂಡುವಾದ ಮಾಡುತ್ತಾ, ಕನ್ನಡಿಗರ ಭಾವನೆಗಳನ್ನು ಕೆಣಕುವ ಕಾರ್ಯ ಮಾಡಲು ಹೊರಟಿರುವುದನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಧಾರವಾಡದ ಸಾಹಿತಿಗಳು, ಭಾಷಾ ಸಂಶೋಧಕರು, ವಿದ್ವಾಂಸರು, ಹೋರಾಟಗಾರರು ಉಗ್ರವಾಗಿ ಈ ಮೂಲಕ ಖಂಡಿಸುತ್ತಿದ್ದೇವೆ. 

ಕನ್ನಡಿಗರು ಸದಾ ಶಾಂತಿಯ ಬದುಕನ್ನು ಬಯಸುವವರು. ಎಲ್ಲ ಭಾಷೆಗಳನ್ನು ಗೌರವಿಸುವವರು. ಹಾಗೇ ತಮಿಳು, ತೆಲಗು, ಮಲೆಯಾಳಿ, ತುಳು ಸಹೋದರ ಭಾಷೆ ಎಂದು ಪ್ರೀತಿಸುತ್ತಾ, ಗೌರವಿಸುತ್ತಾ ಬರಲಾಗುತ್ತಿದೆ. ನಮ್ಮ ಆಕ್ರೋಶ ಇರುವುದು ತಮಿಳು ಭಾಷೆಯ ಮೇಲಾಗಲಿ, ತಮಿಳರ ಮೇಲಾಗಲಿ ಅಲ್ಲ, ಕಮಲ್ ಹಾಸನ್ ಅವರ ಬೇಜವಾಬ್ದಾರಿ ಹೇಳಿಕೆ ಮತ್ತು ನಡೆಯ ಬಗ್ಗೆ ಇರುವಂತಹದ್ದು. 

ಅದಕ್ಕಾಗಿ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳುವ ಮೂಲಕ ತಮ್ಮ ಹೃದಯವಂತಿಕೆ ತೋರಲಿ. ಇಲ್ಲದಿದ್ದರೆ ಅನಿವಾರ್ಯವಾಗಿ ರಾಜ್ಯದಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಮ್ಮ ಮೂಲಕ ಈ ಸಂದೇಶವನ್ನು ಕಮಲ್ ಹಾಸನ್ ಅವರಿಗೆ ತಲುಪಿಸಲು ಕೋರಿ ಈ ಪ್ರತಿಭಟನಾ ಮನವಿಯನ್ನು ಸಲ್ಲಿಸುತ್ತಿದ್ದೇವೆ. 

ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ ಉಪಸ್ಥಿತರಿದ್ದರು