ಲೋಕದರ್ಶನವರದಿ
ಹಾವೇರಿ17: ಅಹಿಂಸೆಯೇ ಶ್ರೇಷ್ಠವಾದ ಧರ್ಮ, ಜೀವಿಸು, ಜೀವಿಸಲು ಬಿಡು, ದಾನವನ್ನು ಮಾಡಿ ಲೋಭವನ್ನು ತ್ಯಜಿಸಿರಿ, ತ್ಯಾಗ ಹಾಗೂ ಅಹಿಂಸಾ ಪರಮೋಧರ್ಮಃ ಎಂಬ ಮಹಾವಾಣಿಯನ್ನು ಭಗವಾನ್ ಮಹಾವೀರರು ಜಗತ್ತಿಗೆ ಸಾರಿದ್ದಾರೆ ಎಂದು ಭಗವಾನ್ 1008 ಮಹಾವೀರ ತೀರ್ಥಂಕರರ 2618ನೇ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ಆಯೋಜಿಸಲಾದ ಮಹಾವೀರ ತೀರ್ಥಂಕರರ ಭಾವಚಿತ್ರ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ಅಗಡಿ ಅಕ್ಕಿಮಠದ ಗುರುಲಿಂಗ ಮಹಾಸ್ವಾಮಿಗಳು ಮಾತನಾಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಸಂಚರಿಸಿದ ಮೆರವಣಿಗೆ ಜಿನಮಂದಿರ ತಲುಪಿತು. ನಗರದ ನೇಮಿನಾಥ ಜೀನಮಂದಿರದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.
ಜೈನಧರ್ಮದಲ್ಲಿ ಭಗವಾನ್ ಮಹಾವೀರ 24ನೇ ತೀರ್ಥಂಕರರಾಗಿದ್ದು, ಕಠಿಣ ತಪಸ್ಸುಮಾಡಿ, ಕೇವಲಜ್ಞಾನ ಸಂಪಾದಿಸಿ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸಮಾನತೆ ಸಂದೇಶ ಸಾರಿದವರು.
ಜೈನ ಧರ್ಮ ತನ್ನದೆ ಇತಿಹಾಸ ಹಾಗೂ ಪರಂಪರೆ ಹೊಂದಿದೆ. ಧರ್ಮಕ್ಕಿಂತ ದೊಡ್ಡದು ಮಾನವೀಯತೆ. ಎಲ್ಲರನ್ನೂ ಗೌರವಿಸೋಣ ಹಾಗೂ ಧರ್ಮ, ಜಾತಿ ಬೇಧಭಾವವಿಲ್ಲದೆ ಎಲ್ಲರೂ ಒಂದಾಗಿ ಭಗವಾನ್ ಮಹಾವೀರರ ಜಯಂತಿ ಆಚರಿಸೋಣ ಎಂದು ಆಶೀರ್ವಚನ ನೀಡಿದರು.
ತೊಟ್ಟಿಲ ಕಾರ್ಯಕ್ರಮ: ಸಂಜೆ ಜಿನಮಂದಿರದಲ್ಲಿ ಭಗವಾನ್ ಶ್ರೀ ಮಹಾವೀರ ತೀರ್ಥಂಕರರನ್ನು ತೊಟ್ಟಿಲಲ್ಲಿ ಹಾಕು ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ನೇಮಿನಾಥ ದಿಗಂಬರ ಜೈನ್ ಕಮೀಟಿ, ಜೈನ್ ಮಿಲನ್, ತರುಣಸಾಗರ ಯುವಕ ಮಂಡಳ, ಸಂಭವನಂದಿ ಮಹಾರಾಜ ಟ್ರಸ್ಟ್, ಆಧಿನಾಥ ಶ್ವೇತಾಂಬರ ಸಂಘ ಹಾಗೂ ರತ್ನತ್ರಯ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.