ಕೃಷಿಯ ಜ್ಞಾನವನ್ನು ನೇರವಾಗಿ ರೈತರಿಗೆ ಜಮೀನಿಗೆ ಕೊಂಡ್ಯೊಯುವುದೇ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಉದ್ದೇಶ: ಡಾ.ಪಾಲಯ್ಯ.ಪಿ

The objective of the 'Vikasita Krishi Sankalpa Abhiyan' is to bring agricultural knowledge directly

ಕೃಷಿಯ ಜ್ಞಾನವನ್ನು ನೇರವಾಗಿ ರೈತರಿಗೆ ಜಮೀನಿಗೆ ಕೊಂಡ್ಯೊಯುವುದೇ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಉದ್ದೇಶ: ಡಾ.ಪಾಲಯ್ಯ.ಪಿ 

ಬಳ್ಳಾರಿ 04: ಕೃಷಿಯ ಜ್ಞಾನವನ್ನು ನೇರವಾಗಿ ರೈತರಿಗೆ ಜಮೀನಿಗೆ ಕೊಂಡ್ಯೊಯುವುದು ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ದ ಮುಖ್ಯ ಉದ್ದೇಶವಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರ ಬಳ್ಳಾರಿ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ.ಪಾಲಯ್ಯ.ಪಿ ಅವರು ಹೇಳಿದರು. 

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ “ವಿಜ್ಞಾನಿಗಳ ನಡೆ ರೈತರ ಕಡೆ” ಎಂಬ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಅಂಗವಾಗಿ ಕಂಪ್ಲಿ ತಾಲ್ಲೂಕಿನ ನೆಲ್ಲುಡಿ, ಎಮ್ಮಿಗನೂರು ಗ್ರಾಮಗಳಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಹಗರಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ತಂಡವು ಜೂ.12 ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕೃಷಿ ಜ್ಞಾನ ಕುರಿತು ತಿಳುವಳಿಕೆ ನೀಡುವರು. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

ರೈತರಿಗೆ ಬೇಕಾಗಿರುವ ಸಂಶೋಧನೆಗಳನ್ನು ಕೃಷಿ ವಿಜ್ಞಾನಿಗಳಿಗೆ ತಲುಪಿಸಿ, ಅವರು ಹೊಸ ಸಂಶೋಧನೆ ಮಾಡುವುದರಿಂದ ಕೃಷಿಯಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬಹುದು ಎಂದು ಹೇಳಿದರು. 

ಅಭಿಯಾನದಲ್ಲಿ ಬೆಂಗಳೂರಿನ ಐಸಿಎಆರ್ ನ್ಯಾಷನಲ್ ಬ್ಯೂರೋಆಫ್ ಅಗ್ರಿಕಲ್ಷರಲ್ ಇನ್ಸೆಕ್ಟ್‌ ರಿರ್ಸಸಸ್ ವಿಜ್ಞಾನಿಗಳಾದ ಡಾ.ಡೇವಿಡ್ ಕೆ.ಜೆ ಅವರು ಮಾತನಾಡಿ ರೈತರಿಗೆ ಭತ್ತದ ಬೆಳೆಯಲ್ಲಿ ಸಮಗ್ರ ರೋಗ ಹಾಗೂ ಕೀಟ ನಿಯಂತ್ರಣ ಜೊತೆಗೆ ಸಾವಯವ ಕೃಷಿ ಪದ್ಧತಿಯಲ್ಲಿ ಜೈವಿಕ ಕೀಟನಾಶಕ ಹಾಗು ಸಸ್ಯಜನ್ಯ ಪಿಡೇನಾಶಕಗಳ ಬಳಕೆಯ ಬಗ್ಗೆ ತಿಳಿಸಿದರು. 

ವಿಜ್ಞಾನಿಗಳಾದ ಡಾ.ನವೀನ್ ಕುಮಾರ್‌.ಪಿ ಅವರು ಮಾತನಾಡಿ, ರೈತರಿಗೆ ಅತಿಯಾದ ಪೀಡೆನಾಶಕಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಇದರಿಂದ ಆರೋಗ್ಯಕ್ಕೆ ಆಗುವ ಹಾನಿಕಾರಕದ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು.  

ಕಂಪ್ಲಿ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಜ್ಯೋತಿ.ಟಿ ಅವರು ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಹಾಗು ರೈತರಿಗೆ ರಿಯಾಯಿತಿ ದರದಲ್ಲಿ ಕೀಟ ಮತ್ತು ರೋಗ ನಿರ್ವಹಣೆಗೆ ಬೇಕಾದ ಪರಿಕರಗಳ ಬಗ್ಗೆ ಮಾಹಿತಿ ನೀಡಿದರು. 

ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತರು ಹಾಜರಿದ್ದರು.