ದೇವರಹಿಪ್ಪರಗಿ 03: ದೇಶದ ಜನರ ಸುರಕ್ಷತೆಗಾಗಿ ತನ್ನ ಪ್ರಾಣ ಒತ್ತೆಯಿಟ್ಟು ಗಡಿಯಲ್ಲಿ ದೇಶ ಕಾಯುವ ಯೋಧರ ಸೇವೆಗೆ ಸರಿಸಾಟಿ ಯಾವುದು ಇಲ್ಲ. ಅಂಥವರನ್ನು ಸನ್ಮಾನಿಸುವುದು ನಾವು ತೋರಿಸುವ ಅಳಿಲು ಸೇವೆಯಾಗಿದೆ ಎಂದು ಚೌಕಿಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕೋರವಾರ ಗ್ರಾಮದಲ್ಲಿ ಮಂಗಳವಾರದಂದು ನಡೆದ ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ ವೀರ ಯೋಧ ಬಸಯ್ಯ ಮಲಕಾಜಯ್ಯ ಶಿರೋಳಮಠ ಅವರಿಗೆ ಗೆಳೆಯರ ಬಳಗ, ಮಾಜಿ ಸೈನಿಕರು ಹಾಗೂ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರುವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮುಂದಿನ ಪೀಳಿಗೆಯೂ ದೇಶ ಸೇವೆ ಮಾಡಲು ಮುಂದೆ ಬರಬೇಕಾದರೇ ಇಂತಹ ಮಹಾನ್ ಯೋಧರ ಪೇರಣೆ ಅತ್ಯಂತ ಮಹತ್ವ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ನಿವೃತ್ತ ಶಿಕ್ಷಕ ಅಕ್ಬರ್ ಶೇಕ್ ಮಾತನಾಡಿದರು. ನಂತರ ಹಲವಾರು ಮುಖಂಡರು ಮಾತನಾಡಿ ದೇಶ ಕಾಯುವ ಯೋಧರ ಸೇವೆ ಶ್ಲಾಘನೀಯ ಎಂದು ಹೇಳಿದರು.
ಸುಮಾರು 22 ವರ್ಷಗಳ ಕಾಲ ದೇಶದ ಭಾರತೀಯ ಸೇನೆಯ ಬ್ರಿಗೇಡ್ ಆಫ್ ಗಾರ್ಡ್ ರೇಜಿಮೆಂಟ್ ಕಾಮಿಟ್ಟಿ ನಾಗಪೂರ, ಕಾಶ್ಮೀರದ ನೌಶೇರಾ,ತಲ್ಕಾಡ್, ಪುಲ್ವಾಮಾ, ಬೈಸ್ ರಾಜಸ್ಥಾನದ ಅಲ್ಬಾರ, ನಶಿರಾಬಾದ, ಜೈಸಲ್ಮೇರದಲ್ಲಿ ಸೇರಿದಂತೆ ದೇಶದ ಆಯಕಟ್ಟಿನ ಜಾಗಗಳಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ಯುದ್ಧಗಳಲ್ಲಿ ಭಾಗಿಯಾಗಿ ದಿಟ್ಟತನದಿಂದ ಹೋರಾಟ ಮಾಡಿ. ಇದೀಗ ಭಾರತೀಯ ಸೇನೆಯ ಸೇವೆ ನಂತರ ನಿವೃತಿ ಹೊಂದಿ, ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ದೂರಿ ಸನ್ಮಾನ ಮಾಡಿ ಸ್ವಾಗತಿಸಿದರು.
ಇದಕ್ಕೂ ಮುನ್ನ ಗ್ರಾಮದ ಯುವಕರು, ಗೆಳೆಯರ ಬಳಗ, ಮಾಜಿ ಸೈನಿಕರು, ದೇಶಾಭಿಮಾನಿಗಳ ಬಳಗದವರು ಹಾಗೂ ಪ್ರಮುಖರು ಗ್ರಾಮದ ಕೆಇಬಿ ವೃತ್ತದ ಹತ್ತಿರ ಅದ್ದೂರಿಯಾಗಿ ಯೋಧನನ್ನು ಬರಮಾಡಿಕೊಂಡು, ಸುಮಾರು 1ಕಿ.ಮೀ ದೂರದ ಕೋರವಾರ ಗ್ರಾಮದ ಕೋರವಾರೇಶ ದೇವಸ್ಥಾನದವರೆಗೆ ನಿವೃತ ಯೋಧನಿಗೆ ಭವ್ಯ ಮೆರವಣಿಗೆ ಮಾಡಿದರು. ಮೆರವಣಿಗೆ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದ ತಾಯಂದಿರು ಮತ್ತು ಗ್ರಾಮಸ್ಥರು ತಲೆಯ ಮೇಲೆ ಕಳಸಗಳನ್ನು ಹೊತ್ತು ಮಂಗಳ ವಾದ್ಯಗಳೊಂದಿಗೆ ಗ್ರಾಮದ ಮಗನಿಗೆ ಭವ್ಯವಾಗಿ ಬರಮಾಡಿಕೊಂಡು ಅಪ್ಪಿಕೊಂಡು ಸನ್ಮಾನಿಸಿದರು.
ಮುಖಂಡರುಗಳಾದ ಸೋಮಶೇಖರ ಹಿರೇಮಠ, ಭೀಮನಗೌಡ ಪಾಟೀಲ, ಶೇಖರಗೌಡ ಪಾಟೀಲ, ರಾಜಶೇಖರ ಛಾಯಗೊಳ, ಭರತ ಕೊಟ್ಟಗಿ, ಶಿವನಗೌಡ ಪಾಟೀಲ, ಭೀಮನಗೌಡ ಕೊಳೆಕುಮಟಗಿ, ಕಲ್ಲನಗೌಡ ಸುಂಕದ, ಮಾಂತಗೌಡ ಪಾಟೀಲ, ಅಯ್ಯಪ್ಪಗೌಡ ಬಿರಾದಾರ, ಶಾಂತು ಅಂಗಡಿ, ದಯಾನಂದ ಗುತ್ತರ್ಗಿಮಠ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಮಾಜಿ ಸೈನಿಕರು, ಮಹಿಳೆಯರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆ ಮಡಿವಾಳಪ್ಪಗೌಡ ಬಿರಾದಾರ ನೆರವೇರಿಸಿದರು.