ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಿ ಘೋಷಣೆಯೊಂದಿಗೆ ಎರಡು ದಿನದ ವ್ಯಕ್ತಿತ್ವ ವಿಕಸನ ಶಿಬಿರ
ಬಳ್ಳಾರಿ 05: ಶಿಕ್ಷಣ-ಮಾನವತೆ-ಸಂಸ್ಕೃತಿ ಉಳಿಸಿ ಘೋಷಣೆಯೊಂದಿಗೆ ಎರಡು ದಿನದ ವ್ಯಕ್ತಿತ್ವ ವಿಕಸನ ಶಿಬಿರವನ್ನು ನಗರದ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಸಾಂಸ್ಕೃತಿಕ ಅಧಃಪತನದ ಕಾರಣದಿಂದಾಗಿ ಉನ್ನತ ನೀತಿ-ಸಂಸ್ಕೃತಿ-ಮೌಲ್ಯಗಳ ಕೊರತೆಯಿರುವುದನ್ನು ಕಾಣುತ್ತಿದ್ದು, ಇದರ ಪರಿಣಾಮ ಇಂದಿನ ವಿದ್ಯಾರ್ಥಿ- ಯುವಜನರು ಇದಕ್ಕೆ ಬಲಿಯಾಗುತ್ತಿರುವುದನ್ನು ಗಮನಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ನೀತಿ-ಮೌಲ್ಯಗಳ ಅವಶ್ಯಕತೆ ಹೆಚ್ಚಿದ್ದು, ಈ ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಗತ್ ಸಿಂಗ್-ನೇತಾಜಿಯವರ ಪ್ರಸ್ತುತತೆಯ ಕುರಿತು ಚರ್ಚೆಯನ್ನು ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ರವರು ನಡೆಸಿಕೊಟ್ಟರು. ಚರ್ಚೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತ, ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಮತ್ತು ನೇತಾಜಿಯವರು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ನಡೆಸಿದ ಸಂಘರ್ಷ ಇಂದಿಗೂ ಸ್ಮರಿಸುವಂತಹದು, ಬರಿ ಸ್ವಾತಂತ್ರ್ಯಕ್ಕಷ್ಟೇ ಸೀಮಿತವಲ್ಲದ ಅವರ ಹೋರಾಟ, ಶೋಷಣ ಮುಕ್ತ ಸಮಾಜವಾದಿ ಭಾರತದ ಕನಸನ್ನು ಹೊಂದಿದ್ದವರು. ಇಂದಿಗೂ ಸಹ ದೇಶದಲ್ಲಿ ಶಿಕ್ಷಣ-ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದಾಗಿ ಅದರಿಂದ ವಂಚಿತರಾಗುತ್ತಿರುವ ಸಂಖ್ಯೆ ಹೆಚ್ಚಿದೆ, ಹಸಿವು-ಬಡತನವೂ ಇಂದು ದೇಶದ ಜನರನ್ನು ಕಾಡುವಂತಹ ಪರಿಸ್ಥಿತಿಯನ್ನು ಕಾಣಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಎಂದು ಕರೆ ನೀಡಿದರು.ಶಿಬಿರದಲ್ಲಿ ಚರ್ಚೆಯ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿನಿಮಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಅಧ್ಯಕ್ಷರು ಕೆ.ಈರಣ್ಣ, ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ, ಉಪಾಧ್ಯಕ್ಷೆ ಎಂ ಶಾಂತಿ, ಉಮಾ, ಕಛೇರಿ ಕಾರ್ಯದರ್ಶಿ ನಿಹಾರಿಕ ಸದಸ್ಯರು ಸಮೀರ್, ಕಾಂತೇಶ್, ಮೋಹನ್, ನಿಕಿತಾ, ಭವಿತಾ ಭುವನೇಶ್ವರಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.