ಧರ್ಮ್ಶಾಲಾ, ಸೆ 14 ಮೂರು ಪಂದ್ಯಗಳ ಟಿ-20 ಸರಣಿ ಆರಂಭಿಸಲು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ. ಯುವ ಆಟಗಾರರ ತಂಡದೊಂದಿಗೆ ಆಗಮಿಸಿರುವ ದಕ್ಷಿಣ ಆಫ್ರಿಕಾ ಕಠಿಣ ಸ್ಪರ್ಧೆ ನೀಡಿ ಜಯ ಸಾಧಿಸುವುದನ್ನು ಎದುರು ನೋಡುತ್ತಿದೆ ಎಂದು ಹರಿಣಗಳ ಬ್ಯಾಟ್ಸ್ಮನ್ ಡೇವಿಡ್ ಮಿಲ್ಲರ್ ತಿಳಿಸಿದ್ದಾರೆ. ದೇಶದ ಪರ ಆಡುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಹಲವು ವರ್ಷಗಳ ಕಾಲ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದೇನೆ. ಇನ್ನೂ ಸಾಕಷ್ಟು ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಇದೆ. ನಮ್ಮದು ಯುವ ಆಟಗಾರರನ್ನು ಒಳಗೊಂಡ ತಂಡವಾಗಿದ್ದು ಭಾರತದ ವಿರುದ್ಧ ಹೆಚ್ಚಿನ ನಿರೀಕ್ಷೆ ಹೊಂದಿದ್ದೇವೆ. ಇಲ್ಲಿಗೆ ನಾವು ಬಂದಿರುವುದು ಗೆಲುವು ಸಾಧಿಸಲು ಎಂದು ಅವರು ಹೇಳಿದರು. ದಕ್ಷಿಣ ಆಫ್ರಿಕಾ ತಂಡ ಕಳೆದ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದೆ. ಹಾಗಾಗಿ, ಏಳನೇ ಸ್ಥಾನ ಪಡೆದಿತ್ತು. ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ವಿಶ್ವಕಪ್ ಟೂರ್ನಿಯ ನಿರಾಸೆಯಿಂದ ಹೊರಬಂದಿದ್ದೇವೆ. ಈ ಟೂರ್ನಿಯಲ್ಲಿ ನಾವು ಕೆಲ ತಪ್ಪುಗಳನ್ನು ಎಸಗಿದ್ದೇವೆ. ಆದರೆ, ಭಾರತ ವಿರುದ್ಧದ ಸರಣಿಗೆ ಪೂರ್ವ ತಯಾರಿ ನಡೆಸಲಾಗಿದೆ. ಪ್ರತಿಯೊಬ್ಬ ಆಟಗಾರನೂ ಕಠಿಣ ಪರಿಶ್ರಮ ನಡೆಸಿದ್ದಾರೆ. ಭಾರತದ ವಿರುದ್ಧ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸವಿದೆ ಎಂದು ಮಿಲ್ಲರ್ ತಿಳಿಸಿದ್ದಾರೆ. ಭಾರತ(ಎ) ವಿರುದ್ಧದ ಸರಣಿಯಲ್ಲಿ ಆಡಿರುವ ನಹುತೇಕ ಆಟಗಾರರು ಪ್ರಸ್ತುತ ತಂಡದಲ್ಲಿದ್ದಾರೆ. ಇಲ್ಲಿ ನಾವು ಒಂದು ವಾರಕ್ಕೂ ಹೆಚ್ಚಿನ ಸಮಯ ಕಳೆದಿದ್ದೇವೆ. ಇಲ್ಲಿನ ವಿಕೆಟ್ ಅತ್ಯುತ್ತಮವಾಗಿದೆ ಎಂದರು.