ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಭಿವೃದ್ಧಿ ಹಳ್ಳ ಹಿಡಿದಿದೆ- ಸಿವಿ ಚಂದ್ರಶೇಖರ್
ಕೊಪ್ಪಳ 07: ಭ್ರಷ್ಟಾಚಾರ ನಿರಂತರ ಬೆಲೆ ಏರಿಕೆ ಹಾಗೂ ದುರಾಡಳಿತದಲ್ಲಿ ನಿರತವಾಗಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಅಂತ್ಯ ಸನ್ನಿ ಹಿತವಾಗಿದೆ ಎಂದು ಜೆ ಡಿ (ಎಸ್) ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆ ವಿರುದ್ಧ ನಗರದ ಬಸವೇಶ್ವರ ವೃತ್ತದಲ್ಲಿ ಜೆ ಡಿ (ಎಸ್) ಪಕ್ಷ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಹಳ್ಳ ಹಿಡಿದಿದೆ ಎಂದು ಕೊಪ್ಪಳದ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳೇ ಮಾಯವಾಗಿವೆ. ಮರಳು ದಂಧೆ ಹೇಳತಿರದಾಗಿದೆ. ಹಿರೇಹಳ್ಳದಲ್ಲಿ ಸುಮಾರು ಒಂದು ನೂರು ಯಂತ್ರಗಳು ಪ್ರತಿನಿತ್ಯ ಮರಳಿಗೆ ಕನ್ನ ಹಾಕುತ್ತಿವೆ. ಶಾಸಕರು ಹಾಗೂ ಲೋಕಸಭಾ ಕ್ಷೇತ್ರದ ಸದಸ್ಯರಾದ ಅವರ ಸಹೋದರ ಕುಟುಂಬ ರಾಜಕಾರಣದಲ್ಲಿ ತೊಡಗಿಕೊಂಡಿದ್ದಾರೆ. ನಮ್ಮ ಕ್ಷೇತ್ರ ಕೊಪ್ಪಳ ರಿಪಬ್ಲಿಕ್ ಆಗಿ ಪರಿವರ್ತನೆಗೊಂಡಿದೆ.
ಮೂರನೇ ಸಲ ಶಾಸಕರಾದರೂ ಅಭಿವೃದ್ಧಿಯನ್ನೇ ಮಾಡದ ಇವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ನಂತರ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ ಮಾತನಾಡಿ "ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯನವರ ಮೇಲೆ ಜನರು ಅಪಾರವಾದ ನೀರೀಕ್ಷೆ ಇಟ್ಟಿದ್ದರು. ಆದರೆ ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನರ ಭಾವನೆಗಳಿಗೆ ಸಿದ್ದರಾಮಯ್ಯನವರು ಕೊಳ್ಳಿ ಇಟ್ಟಿದ್ದಾರೆ. ಬಸ್ ದರ, ಹಾಲಿನ ದರ ಸ್ಟ್ಯಾಂಪ್ ಪೇಪರ್ ದರ ಹೆಚ್ಚಿಸಲಾಗಿದೆ. ಗುತ್ತಿಗೆದಾರರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಒಳಜಗಳ ತಾರಕಕ್ಕೇರಿದೆ. ಇದರಿಂದ ಅಭಿವೃದ್ಧಿ ಕುಂಠಿತಗೊಂಡು ಜನ ಹಿಡಿ ಶಾಪ ಹಾಕುವಂತಾಗಿದೆ," ಎಂದು ಟೀಕಿಸಿದರು.ಬಸ್ ದರ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸಿ ಹೋಗಿದ್ದಾರೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ, ಗ್ಯಾರಂಟಿ ಯೋಜನೆ ಎಂದು ಸರಕಾರ ಒಂದು ಕಡೆ ಪುಕ್ಕಟೆ ಹಣ ನೀಡಿ ಇನ್ನೊಂದು ಕಡೆ ಬೆಲೆ ಏರಿಸುವ ಮೂಲಕ ದುರಾಡಳಿತ ನಡೆಸಿದೆ ಎಂದು ಜೆಡಿಎಸ್ ಮುಖಂಡ ಈಶಪ್ಪ ಮಾದನೂರ ವಾಗ್ದಾಳಿ ನಡೆಸಿದರು.ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿ ಸರಕಾರ ಸಾರಾಯಿಯನ್ನು ಮುಕ್ತವಾಗಿ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕೊಪ್ಪಳ- ಕುಷ್ಟಗಿ ರೈಲ್ವೆ ಮೇಲು ಸೇತುವೆಗೆ ತಮ್ಮ ಕೊಡುಗೆ ಎಂದು ಬೋರ್ಡ್ ಹಾಕಿಸುವ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರಾದ ಸಂಗಣ್ಣ ಕರಡಿಯವರು ಸತ್ಯಕ್ಕೆ ಮಸಿ ಬಳಿದಿದ್ದಾರೆ. ತಮ್ಮ ಸ್ವಂತ ಹಣದಿಂದ ಸೇತುವೆಯನ್ನು ಅವರು ನಿರ್ಮಿಸಿಲ್ಲ. ಅದನ್ನು ನಿರ್ಮಿಸಿದ್ದು ಕೇಂದ್ರ ಸರಕಾರ. ಅವರಿಗೆ ಕನಿಷ್ಠ ಮಾನ ಮರ್ಯಾದೆ ಇದ್ದಿದ್ದರೆ ಇಂತಹ ಕೆಲಸಗಳನ್ನು ಮಾಡುತ್ತಿರಲಿಲ್ಲ. ವಿರೋಧ ಪಕ್ಷದ ಕಾರ್ಯಕರ್ತರು ಸರಕಾರದ ದುರಾಡಳಿತವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರೆ ಸರಕಾರ ಅಧಿಕಾರಿಗಳನ್ನು ಬಳಸಿಕೊಂಡು ಅವರ ಮೇಲೆ ಕೇಸ್ ಹಾಕುತ್ತಿದೆ. ಇದು ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಗೌರವಿಸುವ ರೀತಿಯೇ? ಇದಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ರಾಜ್ಯ ಸರ್ಕಾರ ದಿವಾಳಿಯಾಗಿದ್ದು ಜನರನ್ನ ದಿಕ್ಕು ತಪ್ಪಿಸಿ ಹೆಂಡತಿ ಕೈಗೆ ಒಂದು ರೂಪಾಯಿ ಕೊಟ್ಟು ಗಂಡ ಮಗನ ಜೇಬಿನಿಂದ 10ರೂಪಾಯಿ ಕದಿಯುವ ಹುನ್ನಾರ ನಡೆಸಿದೆ ಜನ ಮೂರ್ಖರಲ್ಲ ಸಿದ್ದರಾಮಯ್ಯ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಜೆಡಿಎಸ್ ಮುಖಂಡ ಕರಿಯಪ್ಪ ಹಾಲವರ್ತಿ ಕಿಡಿಕಾರಿದರು. ನಂತರ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತರಾದ ಮಹೇಶ ಮಾಲಗಿತ್ತಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ನಾಯಕರಾದ ದೇವಪ್ಪ ಕಟ್ಟಿಮನಿ, ಶರಣಪ್ಪ ಜಡಿ, ವೀರೇಶಗೌಡ ಬಗನಾಳ, ಮಾರುತಿ ಪೇರಮಿ, ರಮೇಶ ಡಂಬರಳ್ಳಿ, ಹುಚ್ಚ್ಚಪ್ಪ ಚೌದ್ರಿ, ಮಂಜುನಾಥ ಕುಣಕೇರಿ, ಯಮನಪ್ಪ ಕಟಿಗಿ, ಸೋಮನಗೌಡ, ಶಾಂತಕುಮಾರ, ಆನಂದ ಕರ್ಕಿಹಳ್ಳಿ, ಮೂರ್ತಪ್ಪ ಗೀಣಗೇರಿ, ಮಹೇಶ ಆಗಳಕೇರಿ, ದೇವರಾಜ ಆಗಳಕೇರಿ, ಮೆಹಮೂದ ಹುಸೇನಿ ಬಲ್ಲೆ, ವಿರೂಪಾಕ್ಷಗೌಡ, ವಸಂತ ಹಟ್ಟಿ, ಪ್ರವೀಣ ಇಟಗಿ, ರುದ್ರೇಶ ಕೊಪ್ಪಳ, ಮಲ್ಲಪ್ಪ ಹಂದ್ರಾಳ, ಮಹೇಶ ಮಾದನೂರ, ಯಂಕಪ್ಪ ಕಲಕೇರಿ, ಮಹೇಶ ಕಂದಾರಿ, ಸಿದ್ದರೆಡ್ಡಿ, ಶರಣಪ್ಪ ಸಾಲಮನಿ, ಭೀಮರಡ್ಡಿ ಗದ್ದಿಕೇರಿ, ವಿಜಯ ಕುಮಾರ್ ಪೂಜಾರ, ಮಂಜುನಾಥ್ ಸೊರಟೂರಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.