ಕರವೇಯಿಂದ ಕಮಲಹಾಸನ್ ವಿರುದ್ದ ಪ್ರತಿಭಟನೆ: ‘ಥಗ್ ಲೈಫ್’ ಚಿತ್ರಕ್ಕೆ ತಡೆನೀಡಿ: ಬಿ.ಗೀರೀಶಾನಂದ
ಕೊಪ್ಪಳ 30: ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ, ತಮಿಳು ಭಾಷೆಯಿಂದ ಕನ್ನಡ ಭಾಷೆಯ ಉಗಮವಾಯಿತು ಎಂಬ ತಪ್ಪು ಮತ್ತು ದುರುದ್ದೇಶಪೂರಿತ ಹೇಳಿಕೆಯನ್ನು ಚಲನಚಿತ್ರ ನಟ-ರಾಜಕಾರಣಿ ಕಮಲ್ ಹಾಸನ್ ಅವರು ನೀಡಿರುವುದನ್ನು ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಖಂಡಿಸಿದ್ದಾರೆ. ಶುಕ್ರವಾರದಂದು ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ಕೇಂದ್ರೀಯ ಬಸ್ ನಿಲ್ದಾಣದ ಮುಂದುಗಡೆ ಇರುವ ಶ್ರೀ ಕನಕದಾಸ ವೃತ್ತದಲ್ಲಿ ರಾ.ಹೆ ತಡೆ ನಡೆಸಿ ಅವರ ಪ್ರತಿಕೃತಿದಹಿಸಿ ಆಕ್ರೋಶವ್ಯಕ್ತಪಡಿಸಿ ಮಾತನಾಡಿದ ಅವರು ಕಮಲಹಾಸನ್ ಸುಳ್ಳು ಮತ್ತು ಆಧಾರ ರಹಿತ ಹೇಳಿಕೆಯು ಕನ್ನಡ ಭಾಷೆಯ ಶ್ರೀಮಂತ ಇತಿಹಾಸ ಸಂಸ್ಕ್ರತಿ ಮತ್ತು ಸ್ವಾಭಿಮಾನಕ್ಕೆ ತೀವ್ರ ಆಘಾತವನ್ನು ಉಂಟು ಮಾಡಿದೆ. ಕನ್ನಡಿಗರಿಂದ ತೀವ್ರ ಖಂಡನೆ ಮತ್ತು ವಿರೋಧ ವ್ಯಕ್ತವಾದರೂ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸದೆ, ತಮ್ಮ ಹೇಳಿಕೆಗೆ ಬದ್ಧರಾಗಿರುವುದು ಕನ್ನಡಿಗರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಕರವೇ, ಕಮಲ್ ಹಾಸನ್ ಅವರ ಈ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಹಿನ್ನಲೆಯಲ್ಲಿ ಅವರ ಚಿತ್ರ ‘ಥಗ್ ಲೈಫ್’ (ಇದರ ಬಿಡುಗಡೆಯ ದಿನಾಂಕ 5 ಜೂನ್ 2025 ರಂದು ನಿಗದಿಯಾಗಿದೆ.) ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ತಡೆಯುವ ನಿರ್ಧಾರವನ್ನು ನಾವು ಕೈಗೊಂಡಿದ್ದೇವೆ. ಈ ಚಿತ್ರದ ವಿತರಕರು ತಮ್ಮ ಹೂಡಿಕೆಯನ್ನು ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಎಂದರು. ಪ್ರತಿಭಟನೆಯಲ್ಲಿ ರಾಜ್ಯ ಸಂ.ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ, ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರ.ಕಾರ್ಯದರ್ಶಿ ನಿಂಗಪ್ಪ ಮೂಗಿನ್, ನಗರ ಘಟಕ ಅಧ್ಯಕ್ಷ ಪ್ರಫುಲ್ಕುಮಾರ ಪಾಟೀಲ, ಕುಷ್ಟಗಿ ತಾಲೂಕಾಧ್ಯಕ್ಷ ಪ್ರಕಾಶ ಮನ್ನೇರಾಳ, ಕುಕನೂರ ತಾಲೂಕಾಧ್ಯಕ್ಷ ರಮೇಶ ಹಾಲವರ್ತಿ, ಗಂಗಾವತಿ ತಾಲೂಕಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸಾಮಾಜಿಕ ಜಾಲತಾಣ ಸಂಚಾಲಕ ಸಿದ್ದು ಸಶಿಮಠ, ಮುಖಂಡರಾದ ದೇವೆಂದ್ರ್ಪ ಹಲಬನೂರ, ಅಬ್ಬಾಸ ಬಾವಿಕಟ್ಟಿ, ವೆಂಕಟೇಶ ತಟ್ಟಿ, ಸಂಜೀವಸಿಂಗ್ ಹಜಾರೆ, ಕುಮಾರಸ್ವಾಮಿ ನಾಗರಳ್ಳಿ, ಗೀರೀಶ ಬಾಗಡೆ, ನಾಗರಾಜ ಹಾಲಳ್ಳಿ, ಶರಣಯ್ಯ ಕುಟಗನಳ್ಳಿ ಹಾಗೂ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.