ಮಕ್ಕಳ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ: ಸಿಇಓ ರಾಹುಲ್ ರತ್ನಂ ಪಾಂಡೇಯ

Focus on improving child outcomes: CEO Rahul Ratnam Pandey

ಮಕ್ಕಳ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ: ಸಿಇಓ ರಾಹುಲ್ ರತ್ನಂ ಪಾಂಡೇಯ 

ಕೊಪ್ಪಳ 02: ಜಿಲ್ಲೆಯ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಒತ್ತು ನೀಡಿ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಹೇಳಿದರು. 

ಅವರು ಗುರುವಾರ ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮುಖ್ಯ ಗುರುಗಳು ಹಾಗೂ ನೋಡಲ್ ಅಧಿಕಾರಿಗಳಿಗೆ ಕರೆದ ಎಸ್‌.ಎಸ್‌.ಎಲ್‌.ಸಿ ಹಾಗೂ ಪಿ.ಯು.ಸಿ ಫಲಿತಾಂಶ ಸುಧಾರಣೆ ಕುರಿತು ಪೂರ್ವಬಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.  

ಕಳೆದ ಬಾರಿಗಿಂತ ಈ ಸಲ ಫಲಿತಾಂಶ ನಮ್ಮ ಜಿಲ್ಲೆಯದ್ದು ಹೆಚ್ಚಾಗಬೇಕು. ಈಡಿ ರಾಜ್ಯದಲ್ಲಿ ಹೆಚ್ಚಾಗದಿದ್ದರೂ ಕಲ್ಯಾಣ ಕರ್ನಾಟಕ ಭಾಗದಲ್ಲಾದರೂ ಪ್ರಥಮ ಸ್ಥಾನ ಬರಬೇಕು. ವಾರ್ಷಿಕ ಪರೀಕ್ಷೆಗಳಿಗೆ ಇನ್ನೂ ಒಂದುವರೆ ತಿಂಗಳು ಮಾತ್ರ ಬಾಕಿಯಿದ್ದು, ಕಲಿಕೆಯಲ್ಲಿ ಹಿಂದುಳಿದ ಸಿ ಮತ್ತು ಡಿ ಕೆಟಗರಿ ಮಕ್ಕಳ ಕಲಿಕೆಗೆ ವಿಶೇಷ ಒತ್ತು ನೀಡಿ. ಮಕ್ಕಳ ಹಾಜರಾತಿ ಕಡಿಮೆ ಇದ್ದಲ್ಲಿ ಪಾಲಕರ ಸಭೆ ನಡೆಸಿ, ಅವರಿಗೆ ಮಾಹಿತಿ ನೀಡಿ. ಮಕ್ಕಳ ಕಲಿಕೆಯ ರಿವಿಜನ್ ಮಾಡುವಾಗ ಅವರಿಗೆ ಸುಲಭವಾಗಿ ತಿಳಿಯುವ ಹಾಗೆ ಹೇಳಿ. ಮತ್ತೆ ಈ ಸಭೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ನಡೆಸಲಾಗುವುದು ಎಂದರು.  

ಎ, ಬಿ, ಸಿ ್ಘ ಡಿ ಎಂದು ನಾಲ್ಕು ಕೆಟಗರಿಗಳನ್ನು ಮಾಡಿದ್ದು, ಮೊದಲ ಒಂದು ಮತ್ತು ಎರಡನೇ ಕೆಟಗರಿಯ ಮಕ್ಕಳು ಪಾಸಾಗುತ್ತಾರೆ. ಆದರೆ, ಸಿ ್ಘ ಡಿ ಮಕ್ಕಳ ಫಲಿತಾಂಶ ಕಡಿಮೆಯಾಗಿರುತ್ತದೆ. ಮಕ್ಕಳಿಗೆ ವಿಷಯವಾರು ದಿನಕ್ಕೆ ಒಂದೊಂದು ಪ್ರಶ್ನೆಗಳನ್ನು ನೀಡಿ, ವಾರಕ್ಕೆ ಮೂವತ್ತು ಪ್ರಶ್ನೆಗಳಾಗುತ್ತವೆ. ಅವುಗಳ ಫಲಿತಾಂಶವನ್ನು ಪರೀಶೀಲನೆ ಮಾಡಬೇಕು. ವಿದ್ಯಾರ್ಥಿಗಳ ಶಾಲಾ ಹಾಜರಾತಿ ಹೆಚ್ಚಳಕ್ಕಾಗಿ ಶಿಕ್ಷಕರು ಮನೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. 

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಮಕ್ಕಳ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಬೇಕು. ಈಗಾಗಲೇ ನೇಮಕ ಮಾಡಿದ ನೋಡಲ್ ಅಧಿಕಾರಿಗಳು ತಮಗೆ ವಹಿಸಲಾದ ಶಾಲೆಗಳಿಗೆ ಭೇಟಿ ನೀಡಿ, ಮಕ್ಕಳ ಕಲಿಕಾ ಕಾರ್ಯದ ಬಗ್ಗೆ ಪರೀಶೀಲನೆ ನಡೆಸಬೇಕು. ಪ್ರಶ್ನೆ ಪತ್ರಿಕೆಗಳನ್ನು ವಿಷಯವಾರು ಜಿಲ್ಲೆಯಲ್ಲಿ ಎಲ್ಲಾ ಕಡೆ ಒಂದೇ ರೀತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಜೂನ್ ನಿಂದ ಇಲ್ಲಿಯವರೆಗೆ ಒಟ್ಟು 9 ಸಭೆಗಳು ನಡೆದಿದ್ದು, ಅವುಗಳ ಪ್ರಗತಿಯ ಮಾಹಿತಿಯನ್ನು ನೀಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಈ ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಬಿರಾದಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಜಗದೀಶ್ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ಮುಖ್ಯ ಗುರುಗಳು, ನೋಡಲ್ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.