ಜೂ.8 ರಂದು ಜೈನ ಸಮಾವೇಶ

Jain convention on June 8th

ರಾಯಬಾಗ 29: ಜೈನ ಸಮುದಾಯದ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗವಾಡ ತಾಲೂಕಿನ ಐನಾಪೂರದಲ್ಲಿ ಜೂ.8 ರಂದು ಆಚಾರ್ಯ ಶ್ರೀ ಗುಣಧರ ನಂದಿ ಮುನಿಮಹಾರಾಜರ ನೇತೃತ್ವದಲ್ಲಿ ಜೈನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅರಿಹಂತ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ, ಹಿರಿಯ ಮುಖಂಡರಾದ ಡಿ.ಸಿ.ಸದಲಗಿ ಹೇಳಿದರು.  

ಗುರುವಾರ ಸಾಯಂಕಾಲ ಪಟ್ಟಣದ ಮಹಾವೀರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈನ ಸಮುದಾಯದ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ದಿಗಂಬರ ಮುನಿಗಳಿಗೆ ರಕ್ಷಣೆ ಒದಗಿಸುವುದು, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಜೈನ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವುದು, ಪ್ರಾಚೀನ ಜೈನ ಬಸದಿಗಳನ್ನು ಜಿರ್ನೋದ್ಧಾರ ಮಾಡುವುದು, ರಾಜ್ಯ ಸರ್ಕಾರ ಕೈಗೊಂಡಿರುವ ಜನಗಣತಿಯಲ್ಲಿ ಜೈನ ಸಮುದಾಯದ ಜನಸಂಖ್ಯೆ ಅಂಕಿಅಂಶ ತಪ್ಪಾಗಿರುವುದನ್ನು ಸರಿಪಡಿಸಲು ಒತ್ತಾಯಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ ಗಮನ ಸೆಳೆಯಲು ಬೃಹತ ಸಮಾವೇಶ ಆಯೋಜಿಸಲಾಗಿದೆ ಎಂದು ತಿಳಿಸಿದರು.  

ಈ ಸಮಾವೇಶಕ್ಕೆ ಕರ್ನಾಟಕ ರಾಜ್ಯಪಾಲ ಧಾವರಚಂದ ಗಹ್ಲೊತ ಹಾಗೂ ಭಟ್ಟಾರಕರು ಆಗಮಿಸಲಿದ್ದು, ಸಮಾವೇಶ ಯಶಸ್ವಿಗೊಳಿಸಲು ಜೈನ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.  

ಮುಖಂಡರಾದ ದಶರಥ ಶೆಟ್ಟಿ, ಶೀತಲ ಬೇಡಕಿಹಾಳೆ, ಧೂಳಗೌಡ ಪಾಟೀಲ, ಸಂಜಯ ಬಡೋರೆ, ಪಾರೀಶ ಉಗಾರೆ, ನೇಮಿನಾಥ ಅಸ್ಕಿ, ಧನಪಾಲ ಅಲಗೊಂಡ, ಅಣ್ಣಾಸಾಬ ಪಾಟೀಲ, ಸಂಜು ಹಂಜೆ, ಅಣ್ಣಾಸಾಬ ಖೆಮಲಾಪೂರೆ, ಸಿದ್ದಪ್ಪ ನಾಗನೂರೆ, ಬಾಹುಬಲಿ ಪರಮಗೌಡ, ಬಸಗೌಡ ನಾಗನೂರ, ಪ್ರಕಾಶ ಬೋಳಗೌಡ, ಕಾರ್ಯದರ್ಶಿ ಮಲ್ಲಪ್ಪ ಖಾನಟ್ಟಿ, ಉತ್ತಮ ಕಾಮಗೌಡ, ಆದಿನಾಥ ಶೆಟ್ಟಿ, ಸೂರ್ಯಕಾಂತ ಬಿರಾಜ ಸೇರಿದಂತೆ ಅನೇಕರು ಇದ್ದರು.