ಬೆಳಗಾವಿ 29: ಅಪಾಯದ ಅಂಚಿನಲ್ಲಿರುವ ಮರಗಳ ಸರ್ವೆ ನಡೆಸಿ, ಹಾನಿ ಸಂಭವಿಸುವ ಮುನ್ನವೇ ಎಚ್ಚೆತ್ತು ಕ್ರಮಕೈಗೊಳ್ಳಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಮಂಗೇಶ್ ಪವಾರ್ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ಹೆಸ್ಕಾಂ ಮತ್ತು ಮರ ಕತ್ತರಿಸುವ ಗುತ್ತಿಗೆದಾರರ ಮುಂಜಾಗೃತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಳೆಗಾಲ ಈಗಾಗಲೇ ಆರಂಭವಾಗಿದ್ದು, ಬೆಳಗಾವಿ ಮಹಾನಗರ ಪಾಲಿಕೆ ನಗರದಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ. ಆಯಾ ನಗರ ಸೇವಕರ ಉಪಸ್ಥಿತಿಯಲ್ಲಿ ವಿದ್ಯುತ್ ತಂತಿಗಳಿಗೆ ತಾಗುತ್ತಿರುವ ಮತ್ತು ಅಪಾಯಕಾರಿ ಮರಗಳ ಸರ್ವೆ ನಡೆಸಲು ಸೂಚಿಸಲಾಯಿತು. ಅದರಲ್ಲಿ ಎಬಿಸಿ ಕ್ಯಾಟಗೇರಿಗಳನ್ನು ತಯಾರಿ ತ್ವರಿಗತಿಯಲ್ಲಿ ಕಾರ್ಯಾಚರಣೆಯನ್ನು ಕೈಗೊಂಡು ಅಪಾಯ ಹಾನಿಯಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕೆಂದು ಮಹಾಪೌರರು ಸೂಚಿಸಿದರು.
ಈ ಕುರಿತು ಮಾಹಿತಿ ನೀಡಿದ ಮಹಾನಗರ ಪಾಲಿಕೆಯ ಆಯುಕ್ತ ಶುಭಾ ಬಿ. ಅವರು ನಗರದಲ್ಲಿರುವ ಅಪಾಯಕಾರಿ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸುವುದು ಮತ್ತು ಬೀಳುವಂತಹ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಲು ಸರ್ವೆ ಮಾಡಿ ತೆರವುಗೊಳಿಸಲು ಸೂಚನೆಯನ್ನು ನೀಡಲಾಯಿತು. ಅಲ್ಲದೇ, ಸಹಾಯವಾಣಿಯನ್ನು ಕೂಡ ಆರಂಭಿಸಲಾಗಿದೆ. ಇನ್ನು 15000 ಮೀಟರನಷ್ಟು ನಾಲೆಗಳ ಹೂಳೆತ್ತಲಾಗಿದೆ. ಯುಜಿಡಿ ಮಷೀನ್, ನೂತನ ಜೆಟ್ಟಿಂಗ್ ಮಷೀನ್ , ಸಕ್ಕೀಂಗ್ ಮಷೀನ್, ಯುಜಿಡಿ ವಾಹನಗಳೊಂದಿಗೆ ತಂಡ ಸಜ್ಜಾಗಿದೆ. ಮಳೆಹಾನಿ ಮತ್ತು ಜಾನುವಾರುಗಳ ಹಾನಿಯನ್ನು ವರದಿ ಮಾಡಲು ಕೂಡ ತಂಡವನ್ನು ರಚಿಸಲಾಗಿದೆ ಎಂದರು.
ಇನ್ನು ಕೋವಿಡ್’ಗೆ ಸಂಬಂಧಿಸಿದಂತೆ ಕಟ್ಟೆಚ್ಚರವನ್ನು ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಲ್ಲಿ ಮುಂಜಾಗೃತೆ ಮೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾದ ಹಣಮಂತ ಕೊಂಗಾಲಿ, ನಗರಸೇವಕರಾದ ಜಯತೀರ್ಥ ಸೌಂದತ್ತಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಪುರುಷೋತ್ತಮ, ಉಪ ವಲಯ ಅರಣ್ಯಾಧಿಕಾರಿ ವಿನಯ ಗೌಡರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಶ್ವೀನ್ ಶಿಂಧೆ ಸೇರಿದಂತೆ ಮಹಾನಗರ ಪಾಲಿಕೆ ಹಾಗೂ ಇನ್ನುಳಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ಧರು.