ಸಂಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ: ಎಐಡಿಎಸ್‌ಓ ಸಹಿ ಸಂಗ್ರಹ

Plans to close government schools in the name of integration: AIDSSO collects signatures

ಕೊಪ್ಪಳ 29:ಸಂಯೋಜನೆ ಹೆಸರಿನಲ್ಲಿ 6200 ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು  ವಿರೋಧಿಸಿ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಗಂಗಾವತಿಯ ಬಸ್ ನಿಲ್ದಾಣದ ಎದುರು ಎಐಡಿಎಸ್‌ಓ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದರು.ಈ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ರವಿ ಕಿರಣ್ ಮಾತನಾಡಿ ನಮ್ಮ ದೇಶದಲ್ಲಿ ಸಾವಿತ್ರಿ ಬಾಯಿ ಫುಲೆ, ಜ್ಯೋತಿರಾವ್ ಫುಲೆ, ವಿದ್ಯಾಸಾಗರ ಅಂತ ಮಹನೀಯರು ಎಲ್ಲರಿಗೂ ಶಿಕ್ಷಣ ಸಿಗಬೇಕೆಂದು ಹೋರಾಡಿದ್ದಾರೆ. 

ಅದೇ ರೀತಿ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿಯಂತ ಕ್ರಾಂತಿಕಾರಿಗಳು ಕನಸು ಕೂಡ ಎಲ್ಲರಿಗೂ ಉಚಿತವಾಗಿ ಶಿಕ್ಷಣ ದೊರೆಯಬೇಕೆಂದು ಕನಸು ಕಂಡಿದ್ದರು. ಆದರೆ ಇಂದು ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳು ಶಿಕ್ಷಣವನ್ನು ಖಾಸಗೀಕರಣ ಮಾಡಲು ಮುಂದಾಗಿವೆ. ಕಳೆದ ಬಿಜೆಪಿ ಸರ್ಕಾರ 13,800 ಸರ್ಕಾರಿ ಶಾಲೆ ಮುಚ್ಚಲು ಹೊರಟ್ಟಿತ್ತು ನಮ್ಮ ಹೋರಾಟದ ನಂತರ ಹಿಂಪಡೆಯಿತು. ಈಗಿರುವ ಕಾಂಗ್ರೆಸ್ ಸರ್ಕಾರವು ಈಗ 6000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿದೆ, ಇದನ್ನು ವಿರೋಧಿಸಿ 50 ಲಕ್ಷ ಸಹಿ ಸಂಗ್ರಹ ನಡೆಯುತ್ತಿದ್ದು ರಾಜ್ಯದಾದ್ಯಂತ ಜನಗಳು ಮತ್ತು ಪೋಷಕರು ನಮ್ಮೊಟ್ಟಿಗೆ ಹೋರಾಟವನ್ನು ಸಂಘಟಿಸುವ ಮೂಲಕ ಈಗಾಗಲೇ ಮುಚ್ಚುವ ಪಟ್ಟಿಯಲ್ಲಿರುವ ಶಾಲೆಗಳ ಪೈಕಿ 3 ಶಾಲೆಗಳು ಉಳಿದಿವೆ, ಉಳಿದ ಶಾಲೆಗಳನ್ನು ಉಳಿಸುವ ಜವಾಬ್ದಾರಿ ನಮ್ಮ ಮುಂದಿದೆ ಎಂದರು. 

ನಂತರ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ ಮಾತನಾಡಿ ರಾಜ್ಯದಲ್ಲಿ 10 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ 6 ಸಾವಿರ ಶಾಲೆ, 7,821 ಏಕೋಪಾಧ್ಯಾಯ ಶಾಲೆಗಳಿವೆ,3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ದುರಸ್ತಿ ಇಲ್ಲದೆ ಛಾವಣಿ ಸೋರುತ್ತಿದೆ. ಕೊಪ್ಪಳದಲ್ಲಿ 338 ಶಾಲೆಗಳ ಕೊಠಡಿಗಳು ಶಿಥಿಲ ವ್ಯವಸ್ಥೆಯಲ್ಲಿವೆ, ಹಾಗೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 2542 ಶಿಕ್ಷಕರ ಹುದ್ದೆಗಳು ಖಾಲಿಯಿವೆ ಎಂಬ ವರದಿಯಿದೆ.ನಮ್ಮ ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ಶಾಲೆಗಳು ಮುಚ್ಚುವ ಪಟ್ಟಿಯಲ್ಲಿವೆ ಗಂಗಾವತಿಯ ಭಾಗದಲ್ಲಿಯೇ 20 ಶಾಲೆಗಳು ಈ ಪಟ್ಟಿಯಲ್ಲಿವೆ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಗಂಭೀರ ಸಮಸ್ಯೆಯನ್ನೂ ಪರಿಹರಸದೇ, ಕಡಿಮೆ ದಾಖಲಾತಿ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಖಾಸಗೀಕರಣದ ನೀತಿಯಾಗಿದೆ. ಇದನ್ನು ವಿರೋಧಿಸಿ ನಾವೆಲ್ಲರೂ ಹೋರಾಡಬೇಕೆಂದು ಕರೆ ನೀಡಿದರು.

ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿಂಧು. ಕೆ, ಕಾರ್ಯಕರ್ತರಾದ ಸದಾಶಿವ,ಬಾಬು,ದೀಪ, ದುರ್ಗಮ್ಮ, ದೇವಮ್ಮ,ರಮೇಶ್, ಲಕ್ಷ್ಮಣ,ಶಾಂತಮ್ಮ, ರುದ್ರೇಶ್,ಹುಲ್ಲೇಶ್, ಮಲ್ಲೇಶ್ ಮತ್ತು ಆಕಾಶ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.ಸುದ್ದಿ ಇವರಿಂದ,ಸದಾಶಿವ ಮುನಿರಾಬಾದ್ ಎಐಡಿಎಸ್‌ಓ ಜಿಲ್ಲಾ ಸಂಘಟನಾಕರ.