ಸವದತ್ತಿ 08: ತಾಲ್ಲೂಕಿನ ಸಹೃದಯ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ ರಾಜ್ಯಮಟ್ಟದ ‘ಸಹೃದಯ ಕಾವ್ಯ ಪ್ರಶಸ್ತಿ’ಗೆ ಎರಡು ಕೃತಿಗಳು ಆಯ್ಕೆಯಾಗಿವೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗೇಶ್ ಜೆ. ನಾಯಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಂಗಳೂರಿನ ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನ ಹಾಗೂ ಬಳ್ಳಾರಿಯ ದಸ್ತಗೀರಸಾಬ್ ದಿನ್ನಿ ಅವರ ‘ಮಧು ಬಟ್ಟಲಿನ ಗುಟುಕು’ ಗಜಲ್ ಸಂಕಲನಗಳಿಗೆ ಪ್ರಶಸ್ತಿ ಲಭಿಸಿದೆ.
ಪ್ರತಿಷ್ಠಾನದ ಮೂರನೇ ವರ್ಷದ ಸಂಭ್ರಮದಲ್ಲಿ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. 100 ಕ್ಕೂ ಹೆಚ್ಚು ಕೃತಿಗಳು ಸಲ್ಲಿಕೆಯಾಗಿದ್ದವು. ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ. ಸಿ. ಕೆ. ನಾವಲಗಿ ತೀರ್ುಗಾರರಾಗಿದ್ದರು. ಬರುವ ಮೇ ತಿಂಗಳಿನಲ್ಲಿ ಪಟ್ಟಣದಲ್ಲಿ ನಡೆಯುವ ಸಮಾರಂಭದಲ್ಲಿ ಇಬ್ಬರೂ ಕೃತಿಕಾರರಿಗೆ ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ, ಕಾರ್ಯದರ್ಶಿ ರಮೇಶ್ ತಳವಾರ, ಸಂಚಾಲಕರಾದ ಎಸ್. ಬಿ. ಗರಗದ ಉಪಸ್ಥಿತರಿದ್ದರು.