ವಿದ್ಯಾರ್ಥಿಗಳು ಭವಿಷ್ಯದ ರಾಷ್ಟ್ರರೂಪಿಸುವವರು : ಮೊಹಮ್ಮದ ರೋಷನ್

Students are the future nation builders: Mohammad Roshan

ಬೆಳಗಾವಿ 02:ಪರಿಶ್ರಮ ಹಾಗೂ ಶ್ರದ್ಧೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ನಿಷ್ಠೆಯಿಂದ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ನಿರತರಾಗಿ ಸಾಫಲ್ಯತೆಯನ್ನು ಹೊಂದಬೇಕೆಂದು ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ತಿಳಿಸಿದರು  

ಅವರು ಸೋಮವಾರ ಕೆ.ಎಲ್‌.ಇ ಸಂಸ್ಥೆಯ ಲಿಂಗರಾಜ ಪದವಿ ಮಹಾವಿದ್ಯಾಲಯದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.  

ವಿದ್ಯಾರ್ಥಿಗಳ ದೊಡ್ಡ ಕನಸುಗಳನ್ನು ಹೊಂದಿರಬೇಕು ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ಆ ಕನಸುಗಳನ್ನು ಸಾಕಾರಗೊಳಿಸಬೇಕು. ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಯಶಸ್ಸು ಗಳಿಸಬೇಕೆಂದು ನುಡಿದರು.  

ವಿದ್ಯಾರ್ಥಿಗಳಲ್ಲಿ ಬದ್ಧತೆ, ಏಕಾಗ್ರತೆ, ಸವಾಲುಗಳನ್ನು ಎದುರಿಸುವ ಧೈರ್ಯವಿರಬೇಕು. ಯುವ ಜನತೆ ಆಡಳಿತದಲ್ಲಿ ಭಾಗವಹಿಸಬೇಕು. ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಲ್ಲಿ ಭಯವಿರಬಾರದು. ಸರಿಯಾದ ಸಿದ್ಧತೆಯಿಂದ ಅವರು ಯಶಸ್ಸು ಪಡೆಯಬಹುದು. ಆ ಮೂಲಕ ಉತ್ತಮ ಸಮಾಜ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು  ಹೇಳಿದರು.  

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಂತೇಶ ಕವಟಗಿಮಠ ಜೀವನ ಸಾಧನೆಗಳಿಂದ ಕೂಡಿರಬೇಕು, ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ. ಅವಕಾಶಗಳು ಎಲ್ಲರಿಗೂ ಒಂದೇ ಅವಕಾಶಗಳನ್ನು ಬಳಸಿಕೊಂಡು ಯಶಸ್ಸುಗಳಿಸಬೇಕು. ಸಾಧಕರು ನಿರಂತರ ಪರಿಶ್ರಮದಿಂದ ಯಶಸ್ಸು ಪಡೆದಿದ್ದಾರೆ. ಪರಿಶ್ರಮ ವಿದ್ಯಾರ್ಥಿಗಳನ್ನು ಸಾಧನೆಯ ಮೇರು ಹಂತಕ್ಕೆ ತಲುಪಿಸುತ್ತದೆ ಎಂದರು. ಬದಲಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಅಗತ್ಯತೆಗೆ ತಕ್ಕಂತೆ ಶಿಕ್ಷಕರು ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕೆಂದು ಹೇಳಿದರು.  

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಸುಮಿತ್ ಮುತುಗೇಕರ್, ಸಾಹಿಲ್ ಜಾಧವ ಮತ್ತು ಶಶಾಂಕ್ ಪಾಟೀಲರನ್ನು ಗೌರವಿಸಿ ಸತ್ಕರಿಸಲಾಯಿತು. ಬಿ ಎ ಪದವಿಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ ಆಕಾಶ ಗುಡಗೆನಟ್ಟಿ ಮತ್ತು ಮಹೇಶ್ವರಿ ಕೋರಿ ಬಿ.ಕಾಂ ಪದವಿಯಲ್ಲಿ ಆದರ್ಶ ವಿದ್ಯಾರ್ಥಿಗಳಾಗಿ ಸೋಹಮ್ ಓಲಕರ್ ಮತ್ತು  ಧನ್ಯಾ ಶೆಟ್ಟಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು.  

ಡಾ.ಸಿ. ರಾಮ ರಾವ್, ಡಾ.ಜಿ.ಎನ್‌. ಶೀಲಿ, ಡಾ.ಸಿ.ಬಿ.ಕಮತಿ, ಡಾ.ಎಚ್‌.ಎಮ್‌. ಚನ್ನಪ್ಪಗೋಳ ಉಪಸ್ಥಿತರಿದ್ದರು. ರೋಹಿಣಿ ಹಣಬರಟ್ಟಿ ಪ್ರಾರ್ಥಿಸಿದರು, ಪ್ರಾಚಾರ್ಯ ಡಾ.ಹನಮಂತ ಮೇಲಿನಮನಿ ಸ್ವಾಗತಿಸಿದರು, ಡಾ.ಶಶಿಕಾಂತ ಕೊಣ್ಣೂರ ಅತಿಥಿಗಳನ್ನು ಪರಿಚಯಿಸಿದರು, ವಿನಾಯಕ ವರುಟೆ ಮತ್ತು ನಿಖಿತಾ ಬೆದರೆ ವಾರ್ಷಿಕ ವರದಿ ವಾಚಿಸಿದರು, ಲಕ್ಷ್ಮೀ ಶಿವಣ್ಣವರ ವಂದಿಸಿದರು. ಸುಹಾನಿ  ಮಗದುಮ ಮತ್ತು ಸಿದ್ದನಗೌಡ ಪಾಟೀಲ ನಿರೂಪಿಸಿದರು.