ಬೆಳಗಾವಿ 02: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ನಿರ್ಧಿಷ್ಟವಾದ ಗುರಿ ಹೊಂದಿರಬೇಕು. ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಳಗಾವಿ ಉಪ ನಿರ್ದೇಶಕಿ ಲೀಲಾವತಿ ಹಿರೇಮಠ ಅವರು ಅಭಿಪ್ರಾಯ ಪಟ್ಟರು.
ಬೆಳಗಾವಿಯ ಮಿಲೇನಿಯಂ ಗಾರ್ಡನದಲ್ಲಿ ಜೈನ ಇಂಟರ್ ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜಿತೋ ಸಂಸ್ಥೆಯ ವತಿಯಿಂದ 2025 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಜೈನ ಸಮಾಜದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 12 ನೇ ಆವೃತ್ತಿಯ ವಿದ್ಯಾರ್ಥಿವೇತನ “ಶ್ಯಾಂಕಿ ಯೋಜನೆಯಡಿ ” (ಸ್ಕಾಲರಶಿಪ್) ಚೆಕ್ಕ ವಿತರಣೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿ ಮತ್ತು ವಿದ್ಯಾರ್ಥಿಗಳಿಗೆ ಚೆಕ್ಕ ವಿತರಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿ ಅವರುಗಳು ಮಾಡುವ ಕೆಲಸದಲ್ಲಿ ಸಹಾಯ ಮಾಡುತ್ತ ಕಲಿಕೆಯತ್ತ ಹೆಚ್ಚಿನ ಗಮನ ನೀಡಬೇಕು. ಪಾಲಕರು ಯಾವತ್ತು ತಮ್ಮ ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಜೀನವದಲ್ಲಿ ಯಶಸ್ಸಿನ ದಾರಿಯಲ್ಲಿ ನಡೆಯಬೇಕೆಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉದ್ಯಮಿ ವಿಜಯ ಮೆಟಗುಡ್ಡ ಅವರು ಮಾತನಾಡಿ, ಇಂದು ಜಿತೋ ಸಂಸ್ಥೆಯ ಸದಸ್ಯರು ತನು ಮನ ಧನದಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಆರ್ಥಿಕ ನೆರವು ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಜಿತೋ ಸಂಸ್ಥೆಯ ಕಾರ್ಯ ಇತರೆ ಸಾಮಾಜಿಕ ಸಂಸ್ಥೆಗಳಿಗೆ ಮಾದರಿ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮಾಡುತ್ತಿರುವ ಕಾರ್ಯವನ್ನು ಎಲ್ಲ ಸಂಘ ಸಂಸ್ಥೆಗಳು ಸಹ ಮಾಡಬೇಕೆಂದು ಹೇಳಿದ ಅವರು, ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಶೈಕ್ಷಣೀಕ ಅಧ್ಯಯನಕ್ಕಾಗಿ ಬಳಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಉದ್ಯಮಿ ಶಾಂತಿಲಾಲಜಿ ಪೋರವಾಲ ಅವರು ಮಾತನಾಡಿ, ವಿದ್ಯಾರ್ಥಿಗಳು ಶೀಕ್ಷಣ ಪಡೆಯುವುದು ಇಂದಿನ ಅವಶ್ಯಕತೆಯಾಗಿದೆ. ಉನ್ನತ ಶೀಕ್ಷಣ ಪಡೆದು ಸಮಾಜದ ಉನ್ನತ ಹುದ್ದೆಯನ್ನು ಅಲಂಕರಿಸಬೇಕೆಂದು ಹೇಳಿದರು .
ಸಮಾರಂಭದಲ್ಲಿ ಬೆಳಗಾವಿಯ ಜಿಲ್ಲೆಯಲ್ಲಿ ಜೈನ ಸಮಾಜದ ಆರ್ಥಿಕವಾಗಿ ಹಿಂದುಳಿದ ಒಟ್ಟು 157 ವಿದ್ಯಾರ್ಥಿಗಳಿಗೆ ತಲಾ 7 ಸಾವಿರ ರೂ.ಗಳಂತೆ ವಿದ್ಯಾರ್ಥಿ ವೇತನ (ಸ್ಕಾಲರಶಿಪ್) ವಿತರಿಸಲಾಯಿತು. ಸಮಾರಂಭದಲ್ಲಿ ಶ್ಯಾಂಕಿ ಯೋಜನೆಯ ಮುಖ್ಯ ರೂವಾರಿ ಪೋರವಾಲ ಪರಿವಾರ ಮತ್ತು ಇತರೆ ದಾನಿಗಳು ಹಾಗೂ ಜಿತೋ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಜಿತೋ ಅಧ್ಯಕ್ಷ ಹರ್ಷವರ್ಧನ ಇಂಚಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರಮೋದ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ಯಾಂಕಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿತೋ ಸದಸ್ಯ ಕುಂತಿನಾಥ ಕಲಮನಿ ಜಿತೋ ಸಂಸ್ಥೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ ಅವರು ವಂದಿಸಿದರು. ಅಭಿಜೀತ ಭೋಜನ್ನವರ ಕಾರ್ಯಕ್ರಮ ನಿರೂಪಿಸಿದರು.