ಹಿಪ್ಪರಗಿ ಜಲಾಶಯಕ್ಕೆ ತಿಮ್ಮಾಪೂರ ಭೇಟಿ: ನೀರಿನ ಮಟ್ಟ ಪರೀಶೀಲನೆ
ಜಮಖಂಡಿ 30: ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಭೇಟಿ ನೀಡಿದ ಸಚಿವ ಆರ್,ಬಿ,ತಿಮ್ಮಾಪೂರ ಅವರು ಜಲಾಶಯದ ನೀರಿನ ಮಟ್ಟದ ಪರಿಸ್ಥಿತಿ ಅವಲೋಕಿಸಿದ ಬಳಿಕ, ನಗರದ ರಮಾ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಸದ್ಯ ಇರುವುದಿಲ್ಲ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಜಿಲ್ಲೆಯ ಘಟಪ್ರಭಾ ಹಾಗೂ ಕೃಷ್ಣಾ ನದಿಗಳ ನೀರಿನ ಮಟ್ಟ ಹಾಗೂ ಪ್ರವಾಹ ಪರಿಸ್ಥಿತಿಯ ಸಿದ್ಧತೆಯ ಕುರಿತು ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಪರೀಶೀಲನೆ, ಅಧಿಕಾರಿಗಳಿಂದ ಮಾಹಿತಿ ಪಡೆಯಲು ಪ್ರವಾಸಕೈಗೊಂಡಿದ್ದಾಗಿ ತಿಳಿಸಿದರು.
ಮುಧೋಳ ತಾಲೂಕಿನ ಮಿರ್ಜಿ, ಮಳಲಿ ಗ್ರಾಮಗಳಿಗೆ ಭೇಟಿ ನೀಡಿದ್ದೇನೆ, ಸಧ್ಯಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಭರದಿಂದ ನಡೆದಿವೆ, ಬೀಜ, ಗೊಬ್ಬರದಕೊರತೆಇಲ್ಲಡಿಎಪಿ ಬದಲು ಕಾಂಪ್ಲೆಕ್ಸ ಗೊಬ್ಬರದ ಬಳಕೆಯ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ ಎಂದರು.
ಮುಖ್ಯಮಂತ್ರಿಗಳು ರಾಜ್ಯದಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳ ಸಭೆ ಕರೆದಿದ್ದಾರೆ, ಮಳೆಗಾಲ ಪ್ರವಾಹ ಪರಿಸ್ಥಿತಿ, ಬೀಜ, ಗೊಬ್ಬರಗಳ ಪೂರೈಕೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಲಿದ್ದಾರೆ. ಸಾರ್ವಜನಿಕರಿಗೆ, ರೈತಾಪಿ ವರ್ಗಕ್ಕೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಆಡಳಿತ ಸನ್ನದ್ಧವಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಪ್ರವಾಹ ಸ್ಥಿತಿ ಎದುರಾದರೇ 84 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 203 ಗ್ರಾಮಗಳಿಗೆ ತೊಂದರೆಯಾಗಲಿದೆ. ಈಗಾಗಲೇ ವರದಿ ಸಿದ್ಧ ಪಡಿಸಲಾಗಿದ್ದು ಎಂಥಹದೇ ಪರಿಸ್ಥಿತಿ ಎದುರಾದರೂ ನಿಭಾಯಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ವಿವರಣೆ ನೀಡಿದರು.
ಜಿಲ್ಲೆಯಲ್ಲಿ 21 ಪುರ್ನವಸತಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗಿತ್ತು ಆದರೆ ,ಜನರು ಪುರ್ನವಸತಿ ಕೇಂದ್ರಗಳಿಗೆ ಬರುತ್ತಿಲ್ಲವಾದ್ದರಿಂದ ಮಾಡಿದ ಅಭಿವೃದ್ಧಿಯ ಸದುಪಯೋಗವಾಗುತ್ತಿಲ್ಲ, ಕಟ್ಟಡಗಳು, ರಸ್ತೆ, ಚರಂಡಿಗಳು ಹಾಳಾಗುತ್ತಿವೆ. ಶೇ.60 ರಷ್ಟು ಜನರು ಪುರ್ನವಸತಿ ಕೇಂದ್ರಗಳಿಗೆ ಸ್ಥಳಾಂತರವಾದರೇ ಅವರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ 10 ಕೋಟಿ ರೂಅನುದಾನ ಮಂಜೂರಾಗಿದ್ದು.ಕ್ಷೇತ್ರಗಳ ಅವಶ್ಯಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವದು, ಪೌರಕಾರ್ಮಿಕರು ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ನೀಡಲಿದೆ ಎಂದ ಅವರು ವಿವಿಧ ಇಲಾಖೆಗಳಲ್ಲಿಯ ಸಿಬ್ಬಂದಿಯ ಕೊರತೆ ನೀಗಿಸಲು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.
ಮಾಜಿ ಶಾಸಕ ಆನಂದ ನ್ಯಾಮಗೌಡ, ಜಿಲ್ಲಾಧಿಕಾರಿ ಜಾನಕಿ ಕೆ,ಎಂ, ಜಿಪಂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಡಿವೈಎಸ್ಪಿ ಎಸ್,ರೋಷನ್ ಜಮೀರ, ತಹಸೀಲ್ದಾರ ಸದಾಶಿವ ಮಕ್ಕೊಜಿ, ನಗರಸಭೆ ಪೌರಾಯುಕ್ತ ಜೋತಿ ಗೀರೀಶ, ಲೋಕೋಪಯೊಗಿ ಇಲಾಕೆ ಅಧಿಕಾರಿ ಬಂಡಿವಡ್ಡರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳುಇದ್ದರು.