ಹಿಂದಿನ ವೈದ್ಯರ ಪ್ರಾಮಾಣಿಕತೆ, ಕಾಯಕ ಗೌರವವನ್ನು ರೂಢಿಸಿಕೊಳ್ಳಿ: ಡಾ. ಕೋರೆ
ಬೆಳಗಾವಿ 04: ಹಿಂದಿನ ವೈದ್ಯರ ಪ್ರಾಮಾಣಿಕತೆ, ಕಾಯಕ ಗೌರವ, ನಿಷ್ಠೆಯನ್ನು ಇಂದಿನ ವೈದ್ಯರು ರೂಢಿಸಿಕೊಳ್ಳಬೇಕು. ವೈದ್ಯ ವೃತ್ತಿಯ ಪಾವಿತ್ರತೆಯನ್ನು ಅರಿತು ರೋಗಿಗಳ ಸಾರ್ವಜನಿಕರ ನಂಬಿಕೆಗೆ ಭಂಗವನ್ನುಂಟು ಮಾಡಲಾಗದು. ರೋಗಿಗಳ ಭಾವನಾತ್ಮಕ ವ್ಯಕ್ತಿತ್ವವನ್ನು ಗೌರವಿಸುವ ವೈದ್ಯ ಮಾತ್ರ ನಿಜವಾದ ವೈದ್ಯನಾರಾಯಣ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ 1971ರಿಂದ 1990ರವರೆಗಿನ ಹಳೆಯ ವಿದ್ಯಾರ್ಥಿಗಳು ಗುರುಸ್ಮರಣೆಗಾಗಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯದ ಮುಂದೆ ಪ್ರತಿಷ್ಠಾಪಿಸಲಾದ ಮಾಜಿ ಪ್ರಾಚಾರ್ಯ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್ ಜಿ ದೇಸಾಯಿ ಅವರ ಪ್ರತಿಮೆಯನ್ನು ಉದ್ಘಾಟಿಸಿ ನಂತರ ನಡೆದ ಗುರುವಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಚಿಕ್ಕಮಕ್ಕಳ ತಜ್ಞವೈದ್ಯ ಡಾ. ದೇಸಾಯಿ ಅವರು, ಮಕ್ಕಳ ಮನೋಶಾಸ್ತ್ರವನ್ನೂ ಅರಿತವರಾಗಿದ್ದು, ಮಕ್ಕಳೊಂದಿಗೆ ಬೆರೆಯುವಲ್ಲಿ ನಿಷ್ಣಾತರಾಗಿದ್ದರು. ನಾಡು ಕಂಡ ಅಪರೂಪದ ವೈದ್ಯಕೀಯ ಶಿಕ್ಷಕರಾಗಿದ್ದು, ವೃತ್ತಿಯ ಘನತೆ ಗೌರವಗಳನ್ನು ಎತ್ತಿಹಿಡಿದಿದ್ದರು. ಸತತ 13 ವರ್ಷಗಳ ಕಾಲ ಕೆಎಲ್ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ, ಪ್ರಾದ್ಯಾಪಕರಾಗಿ ಸೇವೆಸಲ್ಲಿಸುತ್ತ ಮಹಾವಿದ್ಯಾಲಯವನ್ನು ಉತ್ತುಂಗಕ್ಕೆ ಕೊಂಡೊಯ್ದರು. ಪ್ರಾದ್ಯಾಪಕ ಮತ್ತು ವಿದ್ಯಾರ್ಥಿಗಳನ್ನು ಸಂಶೋಧನಾ ಪ್ರಕ್ರಿಯೆಗೆ ಅಣಿಗೊಳಿಸಿದವರೇ ಅವರು. ಕಟ್ಟನಿಟ್ಟಿನ ಆಡಳಿತ ನಿರ್ವಹಣೆ ಮತ್ತು ಉತ್ಕೃಷ್ಠ ಬೋಧನೆ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.
ಕಾಯಕದಲ್ಲಿ ನಿರತನಾದೊಡೆ ಗುರುಲಿಂಗ ಜಂಗಮರನ್ನು ಮರೆತು ಅವರ ಹಂಗು ಹರಿಯಬೇಕು ಎನ್ನುವ ಶರಣರ ತಾಕೀತನ್ನು ಅಕ್ಷರ ಸಹಃ ಪಾಲಿಸುತ್ತಿದ್ದರು. ವೃತ್ತಿ ಪಾವಿತ್ರ್ಯವನ್ನು ಎತ್ತಿ ಹಿಡಿದು, ಕಾಯಕ ತತ್ವಕ್ಕನುಗುಣವಾಗಿ ಕಾಯಕಕ್ಕೆ ತಕ್ಕ ಪ್ರತಿಫಲವನ್ನಷ್ಟೇ ಅಪೇಕ್ಷಿಸುತ್ತಿದ್ದರು. ಬೋಧನೆಯನ್ನು ವೃತ್ತಿ ಮತ್ತು ಪ್ರವೃತ್ತಿಯನ್ನಾಗಿ ಸ್ವೀಕರಿಸಿದ್ದ ಡಾ. ದೇಸಾಯಿ ಅವರ ಪಾಠ ಪ್ರವಚನದಂತೆ ಅನುಕರಣೀಯ. 92ರ ಇಳಿವಯಸ್ಸಿನಲ್ಲೂ ಕಾಯಕ ನಿಲ್ಲಿಸದೇ ಸೇವೆ ಸಲ್ಲಿಸಿದರು. ಇನ್ನೊಬ್ಬರ ಬೆವರ ಹನಿಯಲ್ಲಿ ಬೇಯಿಸಿದ ಅನ್ನವು ಜೀರ್ಣವಾಗದ ವಿಷ ಎನ್ನುತ್ತಿದ್ದರು ಎಂದರು.
ಅಥಣಿ ಮೂಲದ ಅಮೇರಿಕಾದ ನಿವಾಸಿ ಹಾಗೂ ದಾನಿಗಳಾದ ಡಾ. ಸಂಪತಕುಮಾರ ಶಿವಣಗಿ ಅವರು ಮಾತನಾಡಿ, ಈ ಭಾಗದಲ್ಲಿ ಕೆಎಲ್ಇ ಸಂಸ್ಥೆ ಇರದಿದ್ದರೆ ಶಿಕ್ಷಣ ಪಡೆಯುವದು ತುಂಬಾ ದುರ್ಬಲವಾಗುತ್ತಿತ್ತು. ಇಂದು ಈ ಭಾಗದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ರಾಂತಿಯಾಗಿದ್ದರೆ ಅದು ಕೆಎಲ್ಇ ಸಂಸ್ಥೆಯಿಂದ ಮಾತ್ರ ಆಗಿದೆ. ಶಿಕ್ಷಣದ ದಾಸೋಹದ ಮೂಲಕ ಈ ನಾಡಿನಲ್ಲಿ ಸಾಮಾಜಿಕ ಸುಧಾರಣೆಗೆ ಕಾರಣವಾಯಿತು. ಡಾ. ಪ್ರಭಾಕರ ಕೋರೆ ಅವರ ಕಾರ್ಯವೈಖರಿ ಹಾಗೂ ದೂರದೃಷ್ಠಿಯ ಫಲವಾಗಿ ಕೆಎಲ್ಇ ಸಂಸ್ಥೆಯು ಇಂದು ವಿಶ್ವದಲ್ಲಿ ಖ್ಯಾತಿ ಗಳಿಸಿದೆ ಎಂದರು.
ಡಾ. ಸಂಪತಕುಮಾರ ಹಾಗೂ ಡಾ. ಉದಯಾ ಶಿವಣಗಿ ದಂಪತಿಗಳನ್ನು ಸತ್ಕರಿಸಲಾಯಿತು. ವೇದಿಕೆ ಮೇಲೆ ಸಂಸ್ಥೆ ಅಧ್ಯಕ್ಷ ಮಹಾಂತೇಶ ಕೌಜಲಗಿ, ನಿರ್ದೇಶಕರಾದ ಡಾ. ವಿ ಎಸ್ ಸಾಧುನವರ, ಡಾ. ಹೆಚ್ ಬಿ ರಾಜಶೇಖರ, ಡಾ. ವಿ ಡಿ ಪಾಟೀಲ, ಕಾಹೆರ ಉಪಕುಲಪತಿ ಡಾ. ನಿತಿನ ಗಂಗಾಣೆ, ಜೆಎನ್ಎಂಸಿ ಪ್ರಾಚಾರ್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ ಉಪಪ್ರಾಚಾರ್ಯ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಾಜೇಶ ಪವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.