ಜ್ಞಾನದೊಂದಿಗೆ ಸಂಸ್ಕೃತಿ-ಸಂಸ್ಕಾರವಂತರಾಗಿ ಬಾಳಿ: ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ
ವಿಜಯಪುರ 18: ವಿದ್ಯಾರ್ಥಿದೆಸೆಯಲ್ಲಿ ಉದಾತ್ತವಾದ ಗುರಿಯನ್ನಿಟ್ಟುಕೊಂಡು ಆ ಗುರಿಯ ಸಾಧನೆಗೆ ಭೇಕಾದ ಸತತ ಪ್ರಯತ್ನ, ನಿರಂತರ ಅಧ್ಯಯನ, ಕಾರ್ಯಶ್ರದ್ಧೆ-ನಿಷ್ಠೆ, ಸಾಧಿಸಬಲ್ಲನೆಂಬ ದೃಢನಂಬಿಕೆಯೊಂದಿಗೆ ಪ್ರಯತ್ನಶೀಲರಾಗಿ ಯಶಸ್ಸು ನಿಮ್ಮದಾಗುತ್ತದೆ. ಪಡೆದ ಜ್ಞಾನದೊಂದಿಗೆ ಬದುಕುವ ಕಲೆಯನ್ನು ಕರಗತ ಮಾಡಿಕೊಂಡು ದೊರೆಯುವ ಅವಕಾಶಗಳನ್ನು ಬಾಚಿಕೊಳ್ಳಬೇಕು ಎಂದು ಮನಃಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಚಂದ್ರಕಾಂತ ಅವರು ಸಲಹೆ ನೀಡಿದರು.ಅವರು ನಗರದ ನವಭಾಗದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ “ಶುಭಹಾರೈಕೆ” ಸಮಾರಂಭದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಾ, ಜೀವನ ನಿಮಗೆ ನೇರವಾಗಿ ಯಶಸ್ಸು ತಂದು ಕೊಡುವುದಿಲ್ಲ. ಅದು ನಮಗೆ ಸಾಧ್ಯತೆಗಳನ್ನು ಮತ್ತು ಅವಕಾಶಗಳನ್ನು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮಲ್ಲಿರುವ ಶಕ್ತಿ-ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಂಡು ಜಯ ಗಳಿಸಬೇಕು. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಮತ್ತು ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದಾಗ ಅಥವಾ ಪರೀಕ್ಷೆಯಲ್ಲಿ ಫೇಲ್ ಆದಾಗ ಜೀವನದಲ್ಲಿ ಹತಾಶೆ, ವೈಫಲ್ಯ ಮತ್ತು ಸೋಲಿನ ಅನುಭವಗಳು ಎಲ್ಲರಿಗೂ ಎದುರಾಗುತ್ತವೆ. ಆದರೆ ನಿಮ್ಮಲ್ಲಿರುವ ಭರವಸೆಯೇ ಜೀವನವನ್ನು ಮುನ್ನಡೆಸುವ ಇಂಧನವಾಗಬೇಕು. ಅಂದಾಗ ನೀರೀಕ್ಷಿತ ಪ್ರಮಾಣದಲ್ಲಿ ಸಾಧನೆಗೈದು ಯಶಸ್ಸು ಗಳಿಸಲು ಸಾಧ್ಯವೆಂದು ಹೇಳಿದರು.ಇನ್ನೊರ್ವ ಅತಿಥಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿಶಾಲಾಕ್ಷೀ ಹೊನ್ನಾಕಟ್ಟಿ ಅವರು ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಲ್ಲಿ ನಲಿ-ಕಲಿ ಮೂಲಕ ಪಠ್ಯದ ಜೊತೆಗೆ ಸ್ವಾವಲಂಬನೆಯನ್ನು ಸಾಧಿಸಲು ಬೇಕಾದ ಪ್ರಾಯೋಗಿಕ ಜ್ಞಾನ, ಸೃಜನಾತ್ಮಕತೆ, ಕೌಶಲ್ಯಾಭಿವೃದ್ಧಿ ಮತ್ತು ಪ್ರಸ್ತುತ ಕೈಗಾರಿಕೆಗಳ ಅಪೇಕ್ಷಿತವಾದ ಸಾಮಥ್ಯವನ್ನು ಒಡಮೂಡಿಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ವಿಷಯ ಜ್ಞಾನದ ಜೊತೆಗೆ ಸಂವಹನ ಕೌಶಲ್ಯ, ಸೃಜನಾತ್ಮಕತೆ, ಕಂಪ್ಯೂಟರ್ ಜ್ಞಾನ ಮತ್ತು ಕಾರ್ಯಕ್ಷಮತೆಯಂತಹ ಗುಣಗಳನ್ನು ಹೊಂದಬೇಕು. ಶಿಕ್ಷಣದೊಂದಿಗೆ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರ, ಸಚ್ಚಾರಿತ್ರ್ಯ, ಮೌಲ್ವಿಕ-ವೈಚಾರಿಕ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಾವೀ ಭವ್ಯ ಭಾರತದ ಸತ್ಪ್ರಜೆಗಳಾಗಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಬೇಕೆಂದು ಕಿವಿಮಾತು ಹೇಳಿದರು.ವಾಣಿಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್.ಖೊದ್ನಾಪೂರ ಮಾತನಾಡಿ, ವಿದ್ಯಾರ್ಥಿಗಳು ಬರಲಿರುವ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು ಉನ್ನತ ಶಿಕ್ಷಣದತ್ತ ಸಾಗಿ, ತಮ್ಮ ಭಾವೀ ಭವಿಷ್ಯ ಜೀವನ ಉಜ್ವಲಗೊಳ್ಳಲಿ. ಉನ್ನತ ವ್ಯಾಸಂಗ ಕೈಗೊಂಡು ಉದ್ಯೋಗ ಪಡೆದಕೊಂಡು ತಮ್ಮ ತಂದೆ-ತಾಯಿಯರು ಕಂಡ ಕನಸನ್ನು ನನಸು ಮಾಡುವಲ್ಲಿ ಪ್ರಯತ್ನಶೀಲರಾಗಬೇಕು. ಜೀವನದಲ್ಲಿ ಸಂಸ್ಕೃತಿ-ಸಂಸ್ಕಾರ, ಮೌಲ್ವಿಕ-ವೈಚಾರಿಕಗಳನ್ನು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಹೊರಹೊಮ್ಮಿರೆಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಡಾ. ಚಂದ್ರಕಾಂತ. ಬಿ. ಅವರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಯಾಗಿ ನೇಮಕಗೊಂಡ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು. ಶಾಂಭವಿ ಪತ್ತಾರ, ವೀರೇಶ ಪತ್ತಾರ, ಬೀರ್ಪ ಉಗಾರ, ಅಕ್ಷಯಕುಮಾರ ಕುಂಬಾರ ಹಾಗೂ ಪ್ರಿಯಾಂಕಾ ಮಹಿಂದ್ರಕರ ತಮ್ಮ ಮೂರು ವರ್ಷಗಳ ಸವಿ ನೆನಪುಗಳನ್ನು ಅನಿಸಿಕೆಗಳ ಮೂಲಕ ಹಂಚಿಕೊಂಡರು. ಸಮಾರಂಭದಲ್ಲಿ ಡಾ. ಎಸ್.ಡಿ.ಬಿರಾದಾರ, ಪ್ರೊ. ಎಸ್.ಡಿ.ತೋಂಟಾಪೂರ, ಪ್ರೊ. ಬಿ.ಎನ್.ಶಾಡದಳ್ಳಿ, ಪ್ರೊ. ಆರ್.ಐ.ಜೋಗೂರ, ಬೋಧಕೇತರ ಸಿಬ್ಬಂದಿ ಶ್ರೀ ಪ್ರಭು ಬಜಂತ್ರಿ, ಆರೀ ಉಸ್ಮಾನಸಾಬ ಮುಜಾವರ, ಇನ್ನಿತರರು ಸಹ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬಿ.ಕಾಂ ವಿಭಾಗದ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಗಾಗಿ ವಿವಿಧ ಮನರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಂಥ ರೂಪದಲ್ಲಿ ಪ್ರಶಸ್ತಿ ನೀಡಲಾಯಿತು. ಐಶ್ವರ್ಯ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ದೀಪ್ತಿ ವಿಶ್ವಕರ್ಮ ಸ್ವಾಗತಿಸಿದರು. ಶ್ರೀಶೈಲ ಪಟ್ಟಣಶೆಟ್ಟಿ ಶರಣು ಸಮರ್ಿಸಿದರು