ಬೆಂಗಳೂರು, ಏ.20, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಪ್ರಾಯೋಗಿಕ ಮಾರುಕಟ್ಟೆಯ ಮೂಲಕ ಪರ್ಯಾಯ ಮಾರ್ಗದ ಮುಖೇನ ಹೊಸ ಜೀವನವನ್ನು ಕಟ್ಟಿಕೊಳ್ಳಲು ಮುಂದಾಗಿದ್ದು, ಇದಕ್ಕೆ ಬೆಂಗಳೂರು ನಗರದ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರ ಉತ್ತಮ ವೇದಿಕೆಯಾಗಿದೆ.ಕೊರೋನಾ ವೈರಾಣು ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್ ಆದೇಶವನ್ನು ಜಾರಿಗೊಳಿಸಿದ ಸಂದರ್ಭದ ಆರಂಭದಲ್ಲಿ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೆ, ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಅರಿತುಕೊಂಡ ಸರ್ಕಾರ ಕೃಷಿ ಚಟುವಟಿಕೆ ಸೇರಿದಂತೆ ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮತ್ತು ಸರಬರಾಜಿಗೆ ಸಂಬಂಧಪಟ್ಟ ನಿಯಮಗಳನ್ನು ಸಡಿಲಿಸುವ ಮೂಲಕ ರೈತರ ಸಹಾಯಕ್ಕೆ ನೆರವಾಯಿತು. ರೈತರ ಗೊಂದಲಗಳ ನಿವಾರಣೆಗೆ ಹಾಗೂ ಸರ್ಕಾರ ರೈತರೊಂದಿಗಿದೆ ಎಂದು ಧೈರ್ಯ ತುಂಬುವ ನಿಟ್ಟಿನಲ್ಲಿ, ರೈತರು ಬೆಳೆದ ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ರಾಯೋಗಿಕ ಸೂಕ್ತ ಮಾರುಕಟ್ಟೆ ಕಲ್ಪಿಸಲು ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ ಅವರು ಇತ್ತೀಚೆಗೆ ದೊಡ್ಡಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಡೆಸಿದ ಸಭೆಯ ಬೆನ್ನಲ್ಲೇ ಅವರ ಸೂಚನೆ ಮೇರೆಗೆ ಮರು ದಿನ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜು ಮತ್ತು ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ವೆಂಕಟರಮಣಯ್ಯ ಅವರ ಅಧ್ಯಕ್ಷತೆಯಲ್ಲಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲ್ಲೂಕಿನ ಪ್ರಮುಖ ರೈತರ ಸಭೆಯ ಪ್ರತಿಫಲವಾದ ಪ್ರಾಯೋಗಿಕ ಮಾರುಕಟ್ಟೆ ರೈತರಿಗೆ ಮಧ್ಯವರ್ತಿಗಳಿಲ್ಲದೇ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸಲು ವೇದಿಕೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಆರಂಭದಲ್ಲಿ ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಬೆಂಗಳೂರು ನಗರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಮಾರಾಟ ಮಾಡಿದರು. ಬಳಿಕ ನಂತರದ ದಿನಗಳಲ್ಲಿ ಆ ಕ್ಷೇತ್ರದಲ್ಲಿರುವ ಕೆಲವು ಅರ್ಪಾಮೆಂಟ್ಗಳ ವಿಳಾಸ ಮತ್ತು ಸಂಪರ್ಕವನ್ನು ಕಲ್ಪಿಸುವ ಮೂಲಕ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿದಂತಾಗಿದೆ ಹಾಗೂ ಕಡಿಮೆ ಬೆಲೆಗೆ ತಾಜಾ ಮತ್ತು ಗುಣಮಟ್ಟದ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿದ ತೃಪ್ತಿ ಗ್ರಾಹಕರಿಗೆ ಇದೆ.
ಇದರ ಮಧ್ಯದಲ್ಲಿ ರೈತರ ಉತ್ಪನ್ನಗಳ ಸಂಘದವರು ಬೆಂಗಳೂರು ನಗರದ ಮಾರತಹಳ್ಳಿಯಲ್ಲಿ ತಮ್ಮಲ್ಲಿರುವ ಸಂಪರ್ಕದ ಮೂಲಕ ಅರ್ಪಾಮೆಂಟ್ಗಳನ್ನು ಹುಡುಕಿಕೊಂಡಿದ್ದು, ಮಧ್ಯವರ್ತಿಗಳಿಲ್ಲದೇ ನೇರ ವ್ಯವಹರಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಈ ಪರ್ಯಾಯ ಪ್ರಾಯೋಗಿಕ ಮಾರುಕಟ್ಟೆ ಮಾರ್ಗ ಕೊರೋನಾ ವೈರಾಣು ಸೋಂಕು ಸಾಂಕ್ರಾಮಿಕ ರೋಗದಿಂದ ಸಂಕಷ್ಟಕ್ಕೆ ಎದುರಿಸುತ್ತಿರುವ ರೈತರ ಜೀವನವನ್ನು ಆರ್ಥಿಕವಾಗಿ ಸಬಲರಾಗಲು ನೆರವಾಗಿದೆ.
ಕಂದಾಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದ ಮೇರೆಗೆ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ರೈತರಿಗೆ ಉತ್ತಮ ಪ್ರಾಯೋಗಿಕ ಮಾರುಕಟ್ಟೆಯನ್ನು ಕಲ್ಪಿಸಲಾಗಿದೆ. ರೈತರಿಗೆ ಎರಡು ದಿನಗಳಿಗೊಮ್ಮೆ ಸಂಪರ್ಕಿಸಿ ಕೊಡಲಾಗಿರುವ ಅರ್ಪಾಮೆಂಟ್ಗಳಿಗೆ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸರಬರಾಜು ಮಾಡಲು ತಿಳಿಸಲಾಗಿದ್ದು, ಇದರಿಂದಾಗಿ ರೈತರು ಮತ್ತು ಗ್ರಾಹಕರಿಗೆ ಉತ್ತಮ ವೇದಿಕೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಯವರು ಹಾಗೂ ರೈತರ ಸಹಕಾರದಿಂದ ಮತ್ತಷ್ಟು ರೈತರು ಈ ಪ್ರಾಯೋಗಿಕ ಮಾರುಕಟ್ಟೆಯ ಪ್ರಯೋಜನೆ ಪಡೆಯಲಿ ಎಂದು ತೋಟಗಾರಿಕೆ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ನಿರ್ದೇಶಕ ಮಹಾಂತೇಶ್ ಮುರುಗೋಡ್ ತಿಳಿಸಿದ್ದಾರೆ.