ರಾಯಬಾಗ 29: ದೇಶದ ಅನ್ನದಾತ ಆಗಿರುವ ರೈತರಿಗೆ ಗುಣಮಟ್ಟದ ಬೀಜ ಮತ್ತು ಗೊಬ್ಬರವನ್ನು ಸರಬರಾಜು ಮಾಡಬೇಕೆಂದು ತಹಶೀಲ್ದಾರ ಸುರೇಶ ಮುಂಜೆ ಹೇಳಿದರು.
ಗುರುವಾರ ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಭವನದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಮುಂಗಾರು ಹಂಗಾಮಿನ ರಸಗೊಬ್ಬರ, ಕೀಟನಾಶಕ ಮತ್ತು ಬೀಜ ಮಾರಾಟಗಾರರ ಹಾಗೂ ಪರವಾನಗಿದಾರರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ನಿಗದಿ ಪಡಿಸಿದ ದರಪಟ್ಟಿಯಲ್ಲಿ ರಸಗೊಬ್ಬರ ಮಾರಾಟ ಮಾಡಬೇಕು. ಕಳಪೆ ಬೀಜ, ರಸಗೊಬ್ಬರ ಮಾರಾಟ ಮಾಡುವ ಮತ್ತು ಅಕ್ರಮ ದಾಸ್ತಾನು ಮಾಡುವ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ ಮಾತನಾಡಿ, ಮಾರಾಟಗಾರರು ರೈತರೊಂದಿಗೆ ಒಳ್ಳೆ ಬಾಂಧವ್ಯ ಹೊಂದಿರಬೇಕು. ರೈತರ ಬೇಡಿಕೆಗೆ ತಕ್ಕಂತೆ ಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಭೂಮಿ ಹದ ಮಾಡಿಕೊಂಡು, ಬಿತ್ತನೆಗೆ ಎಲ್ಲ ಸಿದ್ದತೆ ಮಾಡಿಕೊಂಡಿರುವುದರಿಂದ ಅವರಿಗೆ ಅವಶ್ಯವಿರುವ ಬೀಜ ಮತ್ತು ರಸಗೊಬ್ಬರಗಳನ್ನು ದೊರಕುವಂತೆ ಎಲ್ಲರೂ ನೋಡಿಕೊಳ್ಳಬೇಕೆಂದರು. ರೈತರಿಗೆ ಅವಧಿ ಮೀರಿದ ದಾಸ್ತಾನು ಮಾರಾಟ ಮಾಡಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕೈಗೊಂಡು, ಅವರ ಅಂಗಡಿ ಲೈಸನ್ಸ್ ರದ್ದು ಮಾಡುವುದಾಗಿ ಹೇಳಿದರು.
ಕೃಷಿ ಅಧಿಕಾರಿಗಳಾದ ಆರ್.ಎಸ್.ದತ್ತವಾಡೆ, ರಘುನಾಥ ಪಾಟೀಲ, ಮಾರಾಟಗಾರರ ಸಂಘದ ಅಧ್ಯಕ್ಷ ಶೀತಲ ಕೀರ್ತಿ, ಮಹೇಶ ಮುಗಳಖೋಡ, ಮಹಾದೇವ ಬೊರಗಾಂವೆ ಹಾಗೂ ತಾಲೂಕಿನ ರಸಗೊಬ್ಬರ ಮಾರಾಟಗಾರರು ಇದ್ದರು.