ವಿಜಯಪುರ 29: ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿಯೋಜಿಸಿರುವ ಕೇಂದ್ರ ನೋಡಲ್ ಅಧಿಕಾರಿಗಳು ಬುಧವಾರ ನಿಡಗುಂದಿ ತಾಲೂಕಿನ ಆಲಮಟ್ಟಿ, ಅಬ್ಬಿಹಾಳ, ಗುಡದಿನ್ನಿ ಹಾಗೂ ಬೇನಾಳ ಆರ್.ಸಿ. ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿದ ಜಲ ಜೀವನ ಮಿಷನ್ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರೀಶೀಲಿಸಿತು.
ಕೇಂದ್ರ ಸರ್ಕಾರದ ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಅಲೋಕ ತಿವಾರಿ ಸರ್ ಅವರು, ಜಲಧಾರೆ ಯೋಜನೆಯಡಿ ಆಲಮಟ್ಟಿ ಡ್ಯಾಮ್ನಿಂದ ಬಸವನ ಬಾಗೇವಾಡಿ, ಕೋಲ್ಹಾರ, ನಿಡಗುಂದಿ, ವಿಜಯಪುರ, ಬಬಲೇಶ್ವರ, ತಿಕೋಟಾ ಹಾಗೂ ಇಂಡಿ ಹಾಗೂ ಚಡಚಣ ತಾಲೂಕಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಡಬ್ಲುಟಿಪಿ ನೀರು ಶುದ್ದೀಕರಣ ಘಟಕ ನಿರ್ಮಾಣ ಮಾಡುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.
ಜಾಕವೆಲ್ ಕಾಮಗಾರಿ ಹಾಗೂ ವಿನ್ಯಾಸದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ದೀಕರಣ ಘಟಕ ಹಾಗೂ ಜಾಕ್ವೆಲ್ ನಿರ್ಮಾಣ ಕಾಮಗಾರಿಯನ್ನು ಉತ್ತಮ ಗುಣಮಟ್ಟದಿಂದ ನಿರ್ವಹಿಸಬೇಕು ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಂದಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಬ್ಬಿಹಾಳ ಹೊರ ವಲಯದಲ್ಲಿ ನಿರ್ಮಿಸುತ್ತಿರುವ ಆಡಳಿತತ್ಮಾಕ ವಿಭಾಗ, ಕ್ಲೋರಿನೇಶನ್ ಶೆಡ್, ಕ್ಯಾಸ್ಕೇಡ್ ಏರೇಟರ್ ಸೇರಿ ವಿವಿಧ ಪ್ರಗತಿ ಹಂತದ ಕಾಮಗಾರಿಗಳನ್ನು ಗುಣಮಟ್ಟವನ್ನು ಪರೀಶೀಲಿಸಿದರು.
ಬೇನಾಳ ಆರ್.ಸಿ. ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ (ವಿಡಬ್ಲ್ಯುಎಸ್ಸಿ) ಸದಸ್ಯರು, ವಾಟರ್ಮ್ಯಾನ್ ಹಾಗೂ ಗ್ರಾಮಸ್ಥರೊಂದಿಗೆ ಕೇಂದ್ರ ನೋಡಲ್ ಅಧಿಕಾರಿಗಳು ಸಂವಾದ ನಡೆಸಿದರು.
ಅಲೋಕ ತಿವಾರಿ ಅವರು ಮಾತನಾಡಿ, ಕಮೀಟಿ ಸದಸ್ಯರು ಸಹ ನೀರಿನ ಪರೀಕ್ಷೆ ವಿಧಾನದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು. ಜಲ ಮೂಲದಿಂದ ನೀರಿನ ಮಾದರಿ ಸಂಗ್ರಹಿಸಿ ಕ್ರಮ ಬದ್ದವಾಗಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು ಎಂದು ಸಲಹೆ ನೀಡಿದರು.ಬೇನಾಳ ಗ್ರಾಮದ ಗುಂಡಪ್ಪ ಸಿ. ಮುತ್ತಲದಿನ್ನಿ ಅವರ ಮನೆಗೆ ಭೇಟಿ ನೀಡಿ ಜಲ ಮೂಲಗಳ ನೀರಿನ ಗುಣಮಟ್ಟವನ್ನು ಎಫ್ಟಿಕೆ ಕಿಟ್ ಮೂಲಕ ಪರೀಕ್ಷೆ ನಡೆಸಿದರು.ಚಿಮ್ಮಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ಜಲ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳನ್ನು ಪರೀಶೀಲಿಸಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ನಿಡಗುಂದಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ವಂದಾಲ, ಸಹಾಯಕ ನಿರ್ದೇಶಕ ಶರಣ ಬಸವ ಬಿರಾದಾರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಅಭಿಯಂತರ ವಿ.ಬಿ.ಗೊಂಗಡಿ, ಕೇಂದ್ರ ತಾಂತ್ರಿಕ ಅಧಿಕಾರಿ ರಾಜೇಶ್ ಕುಮಾರ್ ಲುಹಾದಿಯಾ, ಬೇನಾಳ ಗ್ರಾಪಂ ಅಧ್ಯಕ್ಷ ರಮೇಶ ಬಾಲಪ್ಪ ವಂದಾಲ, ಪಿಡಿಒ ಎ.ಎ.ಕೀಜಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.