ಮಾಂಜರಿ 29: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರ ಕಡಿಮೆಯಾಗಿದ್ದು, ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ನದಿಗಳ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಪರಿಣಾಮ 4 ಬ್ಯಾರೇಜಗಳು ಸಂಚಾರಕ್ಕೆ ಮುಕ್ತವಾಗಿವೆ.
ನದಿಗಳ ಮಟ್ಟ ಕ್ಷೀಣಿಸಿದ್ದು ಕೃಷ್ಣಾ ನದಿಯ ಯಡೂರ-ಕಲ್ಲೋಳ, ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ ವೇದಗಂಗಾ ನದಿಯ ಅಕ್ಕೊಳ-ಸಿದ್ದಾಳ ಮತ್ತು ಭೋಜವಾಡಿ-ಶಿವಾಪುರ ಬ್ಯಾರೇಜ್ಗಳು ಸಂಚಾರಕ್ಕೆ ಮುಕ್ತಗೊಂಡಿವೆ. ದೂಧಗಂಗಾ ನದಿಗೆ 7,040 ಕ್ಯೂಸೆಕ್ ಮತ್ತು ಕೃಷ್ಣಾ ನದಿಗೆ 26,415 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ನದಿಗಳು ಒಡಲು ತುಂಬಿ ಹರಿಯುತ್ತಿವೆ. ವೇದಗಂಗಾ ನದಿಯ ಬಾರವಾಡ-ಕುನ್ನೂರ,ಕೃಷ್ಣಾ ನದಿಯ ಮಾಂಜರಿ-ಬಾವನ ಸೌಂದತ್ತಿ ಬ್ಯಾರೇಜ್ ಗಳು ಇನ್ನೂ ಜಲಾವೃತಗೊಂಡಿವೆ. ನಾಳೆಯವರೆಗೆ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಗಳಿವೆ.