ಇಂದು ಕಾತ್ರಾಳದಲ್ಲಿ ನೂತನವಾಗಿ ನಿರ್ಮಿಸಿರುವ ಲಘು ರಥೋತ್ಸವ
ಯಲಬುರ್ಗಾ 01: ತಾಲೂಕಿನ ಕಾತ್ರಾಳ ಗ್ರಾಮದ ಬಸವೇಶ್ವರ ದೇವಸ್ಥಾನದ ಕಾರ್ತಿಕೋತ್ಸವದ ನಿಮಿತ್ಯ ನೂತನವಾಗಿ ನಿರ್ಮಿಸಿರುವ ಲಘು ರಥೋತ್ಸವ (ಉಚ್ಚಯ್ಯ ಉತ್ಸವ) ಇದೇ ದಿನಾಂಕ 2, ಸೋಮವಾರ ನಡೆಯಲಿದೆ. ಮ.ನಿ.ಪ್ರ. ಜಗದ್ಗುರು ವಿಜಯಮಹಾಂತ ಸ್ವಾಮಿಗಳು, ಸಂಸ್ಥಾನ ಮೈಸೂರ ಮಠ, ಕುದರಿಮೋತಿ; ಹಾಗೂ ಷ.ಬ್ರ. ಬಸವಲಿಂಗಯ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಮುರಡಿ ಹಿರೇಮಠ, ಯಲಬುರ್ಗಾ ಇವರು ಎಲ್ಲ ಕಾರ್ಯಕ್ರಮಗಳ ಸಾನಿಧ್ಯ ವಹಿಸಲಿದ್ದು, ವೇ.ಮೂ. ಮಲ್ಲಯ್ಯ ರಾಚಯ್ಯ ಮಠದ ಹಾಗೂ ವೇ.ಮೂ. ಬಸಯ್ಯ ಚನ್ನಬಸಯ್ಯ ಹಿರೇಮಠ ಇವರು ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.ರಥೋತ್ಸವದ ಅಂಗವಾಗಿ ಬೆಳಗ್ಗೆ ಆರು ಗಂಟೆಗೆ ಬಸವೇಶ್ವರ ಮೂರ್ತಿಗೆ ಮಹಾರುದ್ರಾಭಿಷೇಕ, ಎಂಟು ಗಂಟೆಗೆ ಸಕಲ ವಾದ್ಯಮೇಳದೊಂದಿಗೆ ಕುಂಭಮೇಳ ಮತ್ತು ನೂತನ ಕಳಸದ ಮೆರವಣಿಗೆ ಹಾಗೂ ಕಳಸಾರೋಹಣ, ಹತ್ತು ಗಂಟೆಗೆ ಧಾರ್ಮಿಕ ಸಭೆ ಮತ್ತು ಗಣ್ಯರಿಗೆ ಸನ್ಮಾನ, ಮಧ್ಯಾಹ್ನ ಎರಡು ಗಂಟೆಗೆ ನೂತನವಾಗಿ ನಿರ್ಮಿಸಿದ ಲಘು ರಥೋತ್ಸವ, ನಂತರ ಅನ್ನಸಂತರೆ್ಣ ನಡೆಯಲಿವೆ. ಸಂಜೆ ಆರು ಗಂಟೆಗೆ ಕಾರ್ತಿಕೋತ್ಸವ ಮತ್ತು ಗಜಾನನ ಕೋಲಾಟ ಗೆಳೆಯರ ಬಳಗದಿಂದ ಕೋಲಾಟ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಆಗಮಿಸಬೇಕೆಂದು ಬಸವೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಕಾತ್ರಾಳ ಗ್ರಾಮಸ್ಥರು ತಿಳಿಸಿದ್ದಾರೆ.